ವಿಜಯ ಕರ್ನಾಟಕ ಸಂಪಾದಕ ಇ.ರಾಘವನ್ ಇನ್ನಿಲ್ಲ
ನಿನ್ನೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರಾತ್ರಿ 9.20 ರಲ್ಲಿ ಅವರು ಕೊನೆಯುಸಿರೆಳೆದರು. ಪತ್ನಿ ಕುಮುದವಲ್ಲಿ (ಸೆಂಟ್ರಲ್ ಕಾಲೇಜು ಉಪನ್ಯಾಸಕಿ), ಪುತ್ರಿ ಸ್ವಾತಿ (ಇಂಜಿನಿಯರ್, ಇಂಗ್ಲೆಂಡ್), ಅಳಿಯ ಶಂಕರ್ ಹಾಗೂ ತಾಯಿ, ಸೋದರ, ಸೋದರಿಯನ್ನು ಅವರು ಅಗಲಿದ್ದಾರೆ. ನಮ್ಮನ್ನಗಲಿದ ಹಿರಿಯ ಚೇತನಕ್ಕೆ 'ದಟ್ಸ್ ಕನ್ನಡ'ದ ಭಾವಪೂರ್ಣ ಶ್ರದ್ಧಾಂಜಲಿ.
ಬೆಂಗಳೂರಿನಲ್ಲಿ 1951ರ ಜನವರಿ 18ರಂದು ಜನಿಸಿದ ರಾಘವನ್, ಗ್ಯಾಸ್ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದರು. ಮೈಸೂರಿನ ಪತ್ರಿಕೆಯ ಮೂಲಕ ವೃತ್ತಿ ಜೀವನ ಆರಂಭಿಸಿದ ಅವರು ಆ ನಂತರ ಬೆಂಗಳೂರಿನಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ವರದಿಗಾರರಾದರು. 3 ದಶಕಗಳಿಗೂ ಹೆಚ್ಚು ಕಾಲ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ರಾಜಕೀಯ ಹಾಗೂ ಆರ್ಥಿಕ ವಿಶ್ಲೇಷಕರಾಗಿದ್ದರು.
ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಗುಂಡೂರಾವ್ ಹಾಗೂ ರಾಮಕೃಷ್ಣ ಹೆಗಡೆ ಅವರ ಅವಧಿಯಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಕುರಿತು Broadening and Deepening Democracy Political Innovation in Karnataka ಎಂಬ ಪುಸ್ತಕ ಬರೆದಿದ್ದರು. University of Londonನ ಪ್ರೊಫೆಸರ್ James Manor ಈ ಪುಸ್ತಕದ ಸಹ ಲೇಖಕರಾಗಿದ್ದರು.
ದೆಹಲಿಯಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ವರದಿಗಾರರಾಗಿ ಹಲವು ವರ್ಷ ಕೆಲಸ ಮಾಡಿದ್ದ ಅವರು ಟೈಮ್ಸ್ ಸಮೂಹಕ್ಕೆ ಸೇರ್ಪಡೆಯಾಗಿ ಎಕನಾಮಿಕ್ ಟೈಮ್ಸ್ನ ಸಂಪಾದಕರಾಗಿ ಕೆಲಸ ಮಾಡಿದ್ದರು. ಕೆಲ ಕಾಲ ಡಿಎನ್ಎ ಪತ್ರಿಕೆಯ ರಾಜಕೀಯ ಅಂಕಣಕಾರರಾಗಿದ್ದರು. ನಂತರ ವಿಜಯ ನೆಕ್ಸ್ಟ್ ಪುರವಣಿಯ ಸಂಪಾದಕರಾಗಿದ್ದರು. 15 ತಿಂಗಳ ಹಿಂದೆ ವಿಶ್ವೇಶ್ವರ ಭಟ್ ಅವರು ವಿಜಯ ಕರ್ನಾಟಕ ಸಂಪಾದಕರಾಗಿ ನಿರ್ಗಮಿಸಿದ ನಂತರ ರಾಘವನ್ ಆಸ್ಥಾನವನ್ನು ಅಲಂಕರಿಸಿದ್ದರು.