ಶ್ರೀರಾಮುಲು ಬಿಜೆಪಿ ಬಿಟ್ಟಿದ್ದು ನೋವು ತಂದಿದೆ: ಗಡ್ಕರಿ
ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರು ಬಾಲಚಂದ್ರ ಬಣಕ್ಕೆ ಬೋಧಿಸಿದ ಐಕ್ಯತೆ ಮಂತ್ರದ ಬಗ್ಗೆ ಸುದ್ದಿಗಾರರಿಗೆ ಬಾಲಚಂದ್ರ ವಿವರಿಸಿದರು.
ಗಡ್ಕರಿಗೆ ಎಲ್ಲವೂ ತಿಳಿದಿದೆ: ಟಿವಿ 9 ಸುವರ್ಣಟಿವಿ ಡೈಲಿ ನೋಡ್ತೀನಿ ನಿಮಿಷ ನಿಮಿಷದ ಸುದ್ದಿ ನನಗೆ ತಿಳಿಯುತ್ತಿರುತ್ತದೆ. ಎಲ್ಲಾ ಶಾಸಕರ ಚಲನವಲನದ ಮೇಲೆ ನಮ್ಮ ನಿಗಾ ಇರುತ್ತದೆ ಎಂದು ಗಡ್ಕರಿ ಅವರು ಬಾಲಚಂದ್ರರಿಗೆ ಹೇಳಿದ್ದಾರೆ.
ಸುದ್ದಿ ಮಾಧ್ಯಮಗಳ ಹಿಂದೆ ಬೀಳಬೇಡಿ. ಐಕ್ಯತೆಯನ್ನು ಮರೆಯಬೇಡಿ. ಇದೇ ಮಂತ್ರವನ್ನು ಯಡಿಯೂರಪ್ಪ ಅವರ ಕಿವಿಗೂ ಹಾಕಿದ್ದೇವೆ ಎಂದು ಸದಾ ರಾಮ ಮಂತ್ರ ಜಪಿಸುವ ಪಕ್ಷದ ಹಿರಿಯ ಮುಖಂಡ ಗಡ್ಕರಿ ಅವರು ಬಾಲಚಂದ್ರರ ಬಂಡಾಯ ಬಣಕ್ಕೆ ಉಪದೇಶ ಮಾಡಿ ಕಳಿಸಿದ್ದಾರೆ.
ಶ್ರೀರಾಮುಲು ಇರ್ಬೇಕಿತ್ತು : ಹಿಂದುಳಿದ ನಾಯಕ ಶ್ರೀರಾಮುಲು ಪಕ್ಷಕ್ಕೆ ಸಾಕಷ್ಟು ದುಡಿದಿದ್ದಾರೆ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಶ್ರೀರಾಮುಲು ಅವರು ಮತ್ತೆ ಪಕ್ಷಕೆ ಮರಳುವುದಿಲ್ಲ ಎಂಬ ನೋವಿದೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಶ್ರೀರಾಮುಲು ಅವರು ಸಾಕಷ್ಟು ಶ್ರಮಿಸಿದ್ದಾರೆ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ಬಿಎಸ್ ವೈ ಸ್ಥಾನಮಾನದ ಬಗ್ಗೆ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಸದ್ಯಕ್ಕಂತೂ ಸದಾನಂದ ಗೌಡರ ನಾಯಕತ್ವದಲ್ಲಿ ಯಾವದೇ ಬದಲಾವಣೆ ಇಲ್ಲ ಎಂಬ ಭರವಸೆಯನ್ನು ಹೈಕಮಾಂಡ್ ನೀಡಿದೆ ಎಂದು ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬಿಜೆಪಿ ಬಿಕ್ಕಟ್ಟಿನ ನಡುವೆ ಶ್ರೀರಾಮುಲು ಹೆಸರು ಎತ್ತಿದ್ದು, ಬಾಲಚಂದ್ರರಿಗೆ ಅಚ್ಚರಿ ತಂದರೂ ನಮ್ಮ ಸೀಮೆಯ ನಾಯಕನೊಬ್ಬನನ್ನು ಹೊಗಳುವುದು ಕಂಡು ಭಾರಿ ಖುಷಿಗೊಂಡಿದ್ದಾರೆ.