ಲಾಹೋರದಲ್ಲಿ ಭಗತ್ ಸಿಂಗ್ ಸ್ಮರಿಸಿದ ಪಾಕಿಸ್ತಾನಿಗಳು
ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಮಾರ್ಚ್ 23, 1931ರಂದು ಇದೇ ಸ್ಥಳದಲ್ಲಿ ಗಲ್ಲಿಗೇರಿಸಲಾಗಿತ್ತು. ಭಗತ್ ಅವರ 81ನೇ ಪುಣ್ಯತಿಥಿಯ ಸ್ಮರಣಾರ್ಥ ಶುಕ್ರವಾರ ಶದ್ಮನ್ ಚೌಕದಲ್ಲಿ ಸ್ವಾತಂತ್ರ್ಯ ಸೇನಾನಿಗಳಿಗೆ ಗೌರವಪೂರ್ವಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮೇಣಬತ್ತಿಗಳನ್ನು ಬೆಳಗಿ ಮೂವರು ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು.
ಭಗತ್ ಅವರ ತ್ಯಾಗ, ಶೌರ್ಯವನ್ನು ಕೊಂಡಾಡಿದ ಭಗತ್ ಸಿಂಗ್ ಫೌಂಡೇಷನ್ನ ಅಧ್ಯಕ್ಷರಾದ ಅಬ್ದುಲ್ಲಾ ಮಲ್ಲಿಕ್ ಅವರು, "ಭಗತ್ ಸಿಂಗ್ ಫೈಸಲಾಬಾದ್ ಬಳಿಯ ಹಳ್ಳಿಯಲ್ಲಿ ಜನಿಸಿದ್ದರೂ, ಹೋರಾಟ ಮಾಡಿದ್ದು ಯಾವುದೇ ದೇಶಕ್ಕಾಗಿ ಅಲ್ಲ. ಅವರು ಹೋರಾಡಿ ಪ್ರಾಣತ್ಯಾಗ ಮಾಡಿದ್ದು ಜನರಿಗಾಗಿ, ಜನರನ್ನು ಬ್ರಿಟಿಷರಿಂದ ಮುಕ್ತಗೊಳಿಸಲಿಕ್ಕಾಗಿ" ಎಂದು ಕೊಂಡಾಡಿದರು.
ಇಂಥ ಹೀರೋಗಳನ್ನು ಭಾರತ ಮತ್ತು ಪಾಕಿಸ್ತಾನಗಳೆರಡೂ ಸ್ಮರಿಸಿಕೊಳ್ಳಬೇಕು. ಆದರೆ, ಇಂಥವರನ್ನೇ ಇಂದಿನ ರಾಜಕಾರಣಿಗಳು ಮತ್ತು ಇತಿಹಾಸಕಾರರು ಮರೆಯುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.