ಬಾಲಚಂದ್ರ ಜಾರಕಿಹೊಳಿ ಬಣ ದೆಹಲಿ ಭೇಟಿ ರದ್ದು?
ಬುಧವಾರದಂದು ಯಡಿಯೂರಪ್ಪ ಅವರ ಬಣ ದೆಹಲಿಗೆ ಹೊರಟ ಬೆನ್ನಲ್ಲೇ ಜಾರಕಿಹೊಳಿ ಹಾಗೂ ಬಣ ರಾಜ್ಯಪಾಲರನ್ನು ಭೇಟಿ ಮಾಡಿ ಬಿಎಸ್ ವೈ ಬಣಕ್ಕೆ ಆತಂಕ ಮಾಡಿಸಿದ್ದರು.
ನಂತರ ಸಿಎಂ ಡಿವಿಎಸ್ ಹಾಗೂ ಈಶ್ವರಪ್ಪ ಅವರಿಗೂ ಹೈಕಮಾಂಡ್ ನಿಂದ ಬುಲಾವ್ ಬಂದ ಹಿನ್ನೆಲೆಯಲ್ಲಿ ರಾಜಭವನದಿಂದ ಬಾಲಚಂದ್ರ ಹೊರಬಿದ್ದಿದ್ದರು.
ಹೈಕಮಾಂಡ್ ಬುಧವಾರ(ಮಾ.21)ದಂದು ಯಡಿಯೂರಪ್ಪ ಅವರಿಗೆ ಓಕೆ ಎಂದಿದ್ದರೆ, 20 ಶಾಸಕರ ರಾಜೀನಾಮೆ ರಾಜ್ಯಪಾಲರ ಕೈಗಿತ್ತು ಬರಲು ಬಾಲಚಂದ್ರ ಬಣ ತೀರ್ಮಾನಿಸಿತ್ತು. ಆದರೆ, ಆದದ್ದೇ ಬೇರೆ. ಸದಾನಂದ, ಈಶ್ವರಪ್ಪಗೆ ಬುಲಾವ್ ಬಂದ ಮೇಲೆ ಚಿತ್ರಣ ಬದಲಾಯ್ತು.
ಜೊತೆಗೆ 20 ಶಾಸಕರನ್ನು ಕರೆದುಕೊಂಡು ಈ ಸಮಯಕ್ಕೆ ದೆಹಲಿಯಲ್ಲಿರಬೇಕಿದ್ದ ಬಾಲಚಂದ್ರ ಜಾರಕಿಹೊಳಿ ಅವರು ದಿಢೀರ್ ಎಂದು ತಮ್ಮ ನಿರ್ಧಾರ ಬದಲಿಸಲು ಕಾರಣವೇನು? ಸದಾನಂದ, ಈಶ್ವರಪ್ಪ, ಸುರೇಶ್ ಅವರಿಗೆ ಹೈಕಮಾಂಡ್ ನಿಂದ ಸಿಕ್ಕ ಸಂದೇಶವೇನು? ಎಂಬುದು ಕುತೂಹಲಕಾರಿಯಾಗಿದೆ.
ಸದ್ಯ(ಮಾ.30ರ ತನಕ) ಕ್ಕೆ ಸದಾನಂದ ಪರ ಹೈಕಮಾಂಡ್ ಬ್ಯಾಟಿಂಗ್ ಮಾಡುತ್ತಿದ್ದು, ಯಡಿಯೂರಪ್ಪ ಪ್ರೇಕ್ಷಕನ ಸ್ಥಾನದಲ್ಲಿ ಕೂರಿಸಲಾಗಿದೆ. ಹೀಗಾಗಿ ಬಾಲಚಂದ್ರ ಪ್ರವಾಸ ರದ್ದಾಗಿದೆ.
20 ಜನ ಶಾಸಕರು ರಾಜೀನಾಮೆ ನೀಡಲು ರೆಡಿ ಎಂದು ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಘೋಷಿಸಿದರೂ ಅದು ಸಾಧ್ಯವಿಲ್ಲದ ಮಾತು ಎಂಬುದು ಯಡಿಯೂರಪ್ಪಗೂ ಗೊತ್ತಿದೆ.