ಭೂಹಗರಣದಿಂದ ಬಚಾವಾದ ಸಚಿವ ಸೋಮಣ್ಣ
ಪ್ರಕರಣದ ಸಂಬಂಧ ಎಲ್ಲ ಆರೋಪಿಗಳನ್ನು ಮುಕ್ತಗೊಳಿಸಿ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸುತ್ತಿರುವುದಾಗಿ ಲೋಕಾಯುಕ್ತ ಪೊಲೀಸರು ಮಂಗಳವಾರ ಮಧ್ಯಾಹ್ನ ದೂರುದಾರ ರವಿಕೃಷ್ಣಾ ರೆಡ್ಡಿಗೆ ನೋಟಿಸ್ ಮೂಲಕ ತಿಳಿಸಿದ್ದಾರೆ. ಆದರೆ ಇಂದು ಕೋರ್ಟ್ ನೀಡುವ ತೀರ್ಪನ್ನು ಆಧರಿಸಿ, ಮುಂದಿನ ಕಾನೂನು ಹೋರಾಟಕ್ಕೆ ಸಜ್ಜಾಗುವುದಾಗಿ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸಚಿವ ಸೋಮಣ್ಣ ಅವರು ತಮ್ಮ ಪತ್ನಿ ಶೈಲಜಾ ಹೆಸರಿನಲ್ಲಿ ಕೆಂಗೇರಿ ಸಮೀಪದ ನಾಗದೇವನಹಳ್ಳಿಯಲ್ಲಿ 22 ಗುಂಟೆ ಜಮೀನನ್ನು ಕಾನೂನುಬಾಹಿರವಾಗಿ ಡಿನೋಟಿಫಿಕೇಷನ್ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸಾಫ್ಟ್ ವೇರ್ ಇಂಜಿನಿಯರ್ ರವಿಕೃಷ್ಣಾ ರೆಡ್ಡಿ ಕಳೆದ ನವೆಂಬರ್ನಲ್ಲಿ ಲೋಕಾಯುಕ್ತ ಕೋರ್ಟ್ಗೆ ಖಾಸಗಿ ದೂರು ನೀಡಿದ್ದರು.
ಈ ದೂರಿನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲ ಆರೋಪಿಯಾಗಿದ್ದು, ಸಚಿವ ವಿ. ಸೋಮಣ್ಣ, ಪತ್ನಿ ಶೈಲಜಾ ಹಾಗೂ ಜಮೀನು ಮಾಲೀಕ ಡಿ. ಲಿಂಗಯ್ಯ ಅವರನ್ನು ಇತರೆಆರೋಪಿಗಳನ್ನಾಗಿ ಮಾಡಲಾಗಿತ್ತು. ಈ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ನ್ಯಾಯಾಲಯ ಆದೇಶಿಸಿತ್ತು. ಅದರಂತೆ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಈಗ ಬಿ-ರಿಪೋರ್ಟ್ ಸಲ್ಲಿಸಲು ಮುಂದಾಗಿರುವ ಲಕ್ಷಣಗಳು ಗೋಚರಿಸಿವೆ.