ಬಾಲಚಂದ್ರ ಬಣಕ್ಕೆ ಯಡ್ಡಿ ಬಣದಿಂದ ಬೆದರಿಕೆ ಕರೆ
ರೆಸಾರ್ಟ್ ರಾಜಕೀಯ ನಡೆಸುತ್ತಿರುವ ಸಚಿವರೊಬ್ಬರು ಬಾಲಚಂದ್ರ ಜಾರಕಿಹೊಳಿ ಬಣದ ಶಾಸಕರುಗಳ ಮೊಬೈಲ್ ಗಳಿಗೆ ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಹೇಳಿದ್ದಾರೆ.
ಸ್ಥಳೀಯ ವೈಕುಂಠ ಅತಿಥಿ ಗೃಹದಲ್ಲಿರುವ ಡಾ.ಸಾರ್ವಭೌಮ ಬಗಲಿ, ಎಸ್.ಕೆ.ಬೆಳ್ಳುಬ್ಬಿ ಮತ್ತು ರಾಜು ಕಾಗೆ ಅವರ ಜತೆ ಯಡಿಯೂರಪ್ಪ ಬಣ ನಿರಂತರ ಮಾತುಕತೆ ನಡೆಸುತ್ತಿದೆ. ಆಮಿಷಗಳನ್ನು ಒಡ್ಡುತ್ತಿದ್ದಾರೆ. ಒಪ್ಪದ ಶಾಸಕರಿಗೆ ಬೆದರಿಕೆ ಒಡ್ಡುತ್ತಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಬೆಂಬಲ ನೀಡುವುದಿಲ್ಲ. ನಮ್ಮ ಸಂಗಡ ಬರದಿದ್ದರೆ ನಿಮ್ಮ ರಾಜಕೀಯ ಜೀವನ ಅಂತ್ಯಗೊಳಿಸುತ್ತೇವೆ ಎಂದು ಸಚಿವರು ಬೆದರಿಕೆ ಒಡ್ಡಿದ್ದಾರೆ. ನನ್ನ ಬಳಿ ದಾಖಲೆಗಳಿದೆ. ಸೂಕ್ತ ಸಮಯದಲ್ಲಿ ಬಹಿರಂಗಪಡಿಸುತೇನೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬಜೆಟ್ ಮಂಡನೆಗೂ ಮುನ್ನವೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಸಾಧ್ಯವಿಲ್ಲ. ಸದಾನಂದ ಗೌಡರು ಬಜೆಟ್ ಮಂಡಿಸಲಿ ನಂತರ, ರಾಜೀನಾಮೆ ನಿರ್ಧಾರಕ್ಕೆ ನಮ್ಮ ಶಾಸಕರು ಬದ್ಧ ಎಂದು ಸಚಿವ ಬಾಲಚಂದ್ರ ಹೇಳಿದ್ದಾರೆ.