ವಕೀಲರ ವಿರುದ್ಧ ಪತ್ರಕರ್ತರ ಸಮರ: ಡೆ-4
ಇದೇ ವೇಳೆ ರಾಜ್ಯದ ಉದ್ದಗಲಕ್ಕೂ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು, ಆಯಾ ಭಾಗಗಳ ಪತ್ರಕರ್ತರು ಮೆರವಣಿಗೆ ನಡೆಸಿದ್ದಾರೆ. ಈ ಮಧ್ಯೆ ಬೆಳಗಾವಿ ಡಿಸಿ ಕಚೇರಿ ಬಳಿ ಪತ್ರಕರ್ತರು ನಡೆಸುತ್ತಿದ್ದ ಶಾಂತಿಯುತ ಮೆರವಣಿಗೆಗೆ ಸ್ಥಳೀಯ ವಕೀಲರು ಪ್ರತಿರೋಧ ಒಡ್ಡಿದರು.
ಇದರಿಂದ ಕೆಲಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಆದರೆ ಪೊಲೀಸರು ಸಕಾಲಿಕವಾಗಿ ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ರಾಜ್ಯದ ಕೆಲವೆಡೆ ಕೆಲ ವಕೀಲರು ಪತ್ರಿಕೆಯ ಬಂಡಲ್ ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಸುವರ್ಣ ನ್ಯೂಸ್ ಚಾನೆಲಿನ ಮುಖ್ಯಸ್ಥ ವಿಶ್ವೇಶ್ವರ್ ಭಟ್ ಅವರು ' ಪ್ರಕರಣವು ನ್ಯಾಯಾಂಗ ತನಿಖೆಗೇ ಸೀಮಿತವಾಗುವುದು ಬೇಡ. ಈ ವಿಷಯದಲ್ಲಿ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ, ಹೋರಾಟ ನಿಲ್ಲಲ್ಲ' ಎಂದು ಸ್ಪಷ್ಟಪಡಿಸಿದರು. 'ಪತ್ರಕರ್ತರಿಗೆ ಸಂಪೂರ್ಣ ಭದ್ರತೆ ಒದಗಿಸಬೇಕು. ರಕ್ಷಣೆ ಕಲ್ಪಿಸದ ಹೊರತು ಮಾಧ್ಯಮಗಳು ಕೋರ್ಟ್ ಕಲಾಪಗಳ ವರದಿ ಮಾಡುವುದಿಲ್ಲ' ಎಂದೂ ಭಟ್ ಮೆರವಣಿಗೆಯನ್ನು ಉದ್ದೇಶಿಸಿ ಹೇಳಿದರು.
ಪೂರ್ವಭಾವಿ ಸಭೆ: ಈ ಮಧ್ಯೆ, ವಕೀಲರ ಪುಂಡಾಟಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸದಾನಂದರು ಪತ್ರಕರ್ತರು, ವಕೀಲರು, ಪೊಲೀಸರು ಮತ್ತು ಕಾನೂನು ಸಚಿವರ ಸಭೆ ಕರೆದಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ವಿಶ್ವೇಶ್ವರ್ ಭಟ್ ನೇತೃತ್ವದಲ್ಲಿ ಪತ್ರಕರ್ತರು ಖಾಸಗಿ ಹೋಟೆಲಿನಲ್ಲಿ ಸಭೆ ನಡೆಸಿದರು.
ಮುಖ್ಯ ನ್ಯಾಯಾಧೀಶರಿಗೆ ಮನವಿ: ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಅವರನ್ನು ಭೇಟಿ ಮಾಡಿದ ಪತ್ರಕರ್ತರು ವಕೀಲರ ಪುಂಡಾಟಿಕೆಯ ಬಗ್ಗೆ ಗಮನ ಸೆಳೆದರು. ಸುವರ್ಣ ನ್ಯೂಸ್ ಸಂಪಾದಕ ವಿಶ್ವೇಶ್ವರ್ ಭಟ್, ಜನಶ್ರೀ ಅನಂತ್ ಚಿನಿವಾರ್, ಟಿವಿ9 ಮಹೇಂದ್ರ ಮಿಶ್ರಾ, ಸಮಯ ಚಾನೆಲಿನ ಶಿವಪ್ರಸಾದ್, ಉದಯ ನ್ಯೂಸ್ ಸಮೀವುಲ್ಲಾ, ಎನ್ ಡಿಟಿವಿ ಮಾಯಾಶರ್ಮಾ, ಕನ್ನಡ ಪ್ರಭ ಸಹಸಂಪಾದಕ ಪಿ. ತ್ಯಾಗರಾಜ್, ವರದಿಗಾರರ ಒಕ್ಕೂಟದ ಪ್ರಭಾಕರ್, ಸಂಯುಕ್ತ ಕರ್ನಾಟಕ ಸಂಪಾದಕ ಹುಣಸವಾಡಿ ರಾಜನ್, ಆಜ್ ತಕ್ ಚಾನೆಲಿನ ಖುರೇಶಿ ಮುಂತಾದವರು ಭಾಗವಹಿಸಿದ್ದರು.