ನ್ಯಾಯ ಸಿಗುವವರೆಗೆ ಪತ್ರಕರ್ತರ ಹೋರಾಟ ನಿಲ್ಲದು
ವಕೀಲರ ಪುಂಡಾಟಿಕೆಯಿಂದ ಪತ್ರಕರ್ತರು ನಿರ್ಭಿಡೆಯಿಂದ ವರದಿ ಮಾಡಲು ಸಾಧ್ಯವಾಗುತ್ತಿಲ್ಲ. ಪತ್ರಕರ್ತರು ಶಾಂತಿಪ್ರಿಯರು ಮತ್ತು ಸಹನೆಯಿಂದ ವರ್ತಿಸುವವರು. ಯಾವತ್ತೂ ಕಾನೂನನ್ನು ಕೈಗೆ ತೆಗೆದುಕೊಳ್ಳುವವರಲ್ಲ. ಮಾ.2ರಂದು ನಡೆದಂಥ ಭೀಕರ ಘಟನೆ ಹಿಂದೆಂದೂ ನಡೆದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಪತ್ರಕರ್ತರು ಧೈರ್ಯದಿಂದ ವರದಿ ಮಾಡುವಂತಹ ವಾತಾವರಣ ಸರಕಾರ ಕಲ್ಪಿಸಿಕೊಡಬೇಕು. ಅಂತಹ ವಾತಾವರಣ ಸೃಷ್ಟಿಯಾಗುವವರೆಗೆ ಕೋರ್ಟ್ಗೆ ಸಂಬಂಧಿಸಿದ ಯಾವುದೇ ವರದಿಗಾರಿಕೆ ನಾವು ಮಾಡಬಾರದು ಎಂದು ಘೋಷಿಸಿದರು.
ಈಗ ಸರಕಾರ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ಈ ಘಟನೆಯ ಹಿಂದೆ ಸರಕಾರದ ಕೈವಾಡವಿದೆ ಎಂದು ಮೇಲುನೋಟಕ್ಕೆ ಸಾಬೀತಾಗುತ್ತದೆ. 5 ಕೋಟಿ ಕನ್ನಡಿಗರನ್ನು ರಕ್ಷಿಸುತ್ತಿರುವ ಪೊಲೀಸರ ರಕ್ಷಣೆಗೂ ಸರಕಾರ ಯತ್ನಿಸುತ್ತಿಲ್ಲ. ಪೊಲೀಸರಿಗೇ ಈ ದುರವಸ್ಥೆ ಬಂದರೆ ಇನ್ನು ಅವರನ್ನು ನಂಬಿ ಧೈರ್ಯದಿಂದ ಮುನ್ನುಗ್ಗುವ ಪತ್ರಕರ್ತರ ಪಾಡೇನು ಎಂಬ ಮಾತುಗಳು ಕೇಳಿಬಂದವು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಪಡೆ ಕಾವಲಿಗೆ ನಿಂತಿತ್ತು, ರಸ್ತೆ ಸಂಚಾರವೂ ಸುಗಮವಾಗಿ ಸಾಗುತ್ತಿತ್ತು.
ಪ್ರತಿಭಟನೆಯ ಮುಂದುವರಿದ ಕ್ರಮವಾಗಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ಗಾಂಧಿ ಪ್ರತಿಮೆ ಎದಿರು ವಕೀಲರ ಪ್ರತಿಕೃತಿ ದಹಿಸುವ ಕಾರ್ಯಕ್ರಮವನ್ನು ಬೆಂಗಳೂರು ವರದಿಗಾರರ ಕೂಟ ಹಮ್ಮಿಕೊಂಡಿದೆ. ಈ ನಡುವೆ, ಪತ್ರಿಕಾ ಕಚೇರಿ ಮೇಲೂ ದಾಳಿ ನಡೆಸಲು ವಕೀಲರು ಸಂಚು ಹೂಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿತು. ಪತ್ರಿಕಾ ಕಚೇರಿ ಮೇಲೆ ದಾಳಿಗಳಾದರೆ ಅದಕ್ಕೂ ಸರಕಾರವೇ ಹೊಣೆಯಾಗುತ್ತದೆ ಎಂಬ ಎಚ್ಚರಿಕೆಯನ್ನು ಸರಕಾರಕ್ಕೆ ನೀಡಲಾಯಿತು.