ವಕೀಲರನ್ನು ಸಮರ್ಥಿಸಿಕೊಂಡ ಪ್ರಮೀಳಾ ನೇಸರ್ಗಿ
ಜನಶ್ರೀ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡುತ್ತಿದ್ದ ಪ್ರಮೀಳಾ, ಖಾಸಾಗಿ ವಾಹಿನಿಗಳು ತಮ್ಮತಮ್ಮ ವರದಿಗಾರರಿಗೆ ಮತ್ತು ವಾಹನಗಳಿಗೆ ಆದ ಹಲ್ಲೆಗಳನ್ನು ಬಿಂಬಿಸಿ ಪ್ರಸಾರ ಮಾಡುತ್ತಿವೆ. ಸಾವಿರಾರು ವಕೀಲರಿಗೆ ಆದ ತೊಂದರೆಗಳನ್ನು ಯಾಕೆ ಪ್ರಸಾರ ಮಾಡುತ್ತಿಲ್ಲ. ವಕೀಲರ ನೂರಾರು ವಾಹನಗಳಿಗೆ ತೊಂದರೆಯಾಗಿದೆ ಇದನ್ನು ಯಾಕೆ ಗಮನಿಸುತ್ತಿಲ್ಲ ಎಂದು ಮಾಧ್ಯಮದ ಮೇಲೆ ಕಿಡಿಕಾರಿದ್ದಾರೆ.
ನಮ್ಮ ವಕೀಲರ ಮೇಲೆ ಲಾಠಿಚಾರ್ಜ್ ಮಾಡಲಾಯಿತು. ಮಹಿಳಾ ವಕೀಲರ ಜೊತೆ ಅಸಭ್ಯವಾಗಿ ವರ್ತಿಸಲಾಯಿತು. ಇದನ್ನೆಲ್ಲಾ ನೀವು ಮಾಧ್ಯಮದವರು ಯಾಕೆ ಹೈಲೈಟ್ ಮಾಡುತ್ತಿಲ್ಲ. ಸಿವಿಲ್ ಕೋರ್ಟ್ ಸಮುಚ್ಚಯದ ಮೂರನೇ ಅಂತಸ್ತಿನಿಂದ ನಮ್ಮವರು ಕಲ್ಲು ತೂರಿದ ಘಟನೆ ಸತ್ಯಕ್ಕೆ ದೂರವಾಗಿದ್ದು ಎಂದು ನೇಸರ್ಗಿ ಸಮರ್ಥಿಸಿಕೊಂಡಿದ್ದಾರೆ.
ಈ ಘಟನೆಗೆ ಸಂಭಂದಿಸಿದಂತೆ ಯಾವುದೇ ತನಿಖೆ ನಡೆಯಲಿ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ. ಸತ್ಯ ಹೊರಬರಲಿ ಎನ್ನುವುದು ನಮ್ಮ ಉದ್ದೇಶ ಕೂಡಾ, ನೀವು ಮಾಧ್ಯಮದವರು ವಕೀಲರು ಅನುಭವಿಸುತ್ತಿರುವ ತೊಂದರೆಗಳ ಕಡೆ ಕೂಡಾ ಗಮನ ನೀಡಿ ಎಂದು ಪ್ರಮೀಳ ನೇಸರ್ಗಿ ಮಾಧ್ಯಮದವರಿಗೆ ತಿರುಗೇಟು ನೀಡಿದ್ದಾರೆ.