ನಾಳಿನ ನಾಯಕರನ್ನು ಹುರಿದುಂಬಿಸಿದ ರಾಬಿನ್ ಶರ್ಮಾ
ಲಾಭ ರಹಿತ ಸಂಸ್ಥೆಯಾದ 'ರಂಗ ದೇ' ಆಯೋಜಿಸಿದ್ದ ಈ ವಿಚಾರ ಸಂಕಿರಣದಲ್ಲಿ ಉದ್ಯಮಿಗಳು, ಐಟಿ ಕಂಪನಿಗಳ ಮುಖ್ಯಸ್ಥರು, ವೃತ್ತಿಪರರು ಮತ್ತು ಅನೇಕ ಯುವಕ ಯುವತಿಯರು ಭಾಗವಹಿಸಿದ್ದರು. ಬೆಂಗಳೂರು ಮಾತ್ರವಲ್ಲ ದೂರದ ಮುಂಬೈ, ಗುರಗಾಂವ್, ಪುಣೆ, ವಿಶಾಖಪಟ್ಟಣ, ಅಹ್ಮದಾಬಾದ್ ಮತ್ತು ಚೆನ್ನೈನಿಂದಲೂ ರಾಬಿನ್ ಶರ್ಮಾ ಮಾತಿಗೆ ಕಿವಿಯಾಗಲು, ಪ್ರೇರೇಪಣೆ ಪಡೆಯಲು ಬಂದಿದ್ದರು.
ಭಾರತದಲ್ಲಿ ಈ ವರ್ಷ ರಾಬಿನ್ ಅವರ ಇದೊಂದೆ ಕಾರ್ಯಕ್ರಮ ಆಯೋಜಿಸಿದ್ದರಿಂದ ದೇಶದ ಎಲ್ಲೆಡೆಯಿಂದ ನಾಯಕತ್ವದಲ್ಲಿ ಆಸಕ್ತಿ ಇರುವವರು ಬಂದಿದ್ದರು. ರಾಬಿನ್ ಶರ್ಮಾ ಅವರು ತಮ್ಮ ಅತ್ಯಂತ ಸ್ಫೂರ್ತಿದಾಯಕವಾದ ಉಪನ್ಯಾಸದಲ್ಲಿ ನಾಯಕತ್ವ, ಯಶಸ್ಸು ಗಳಿಸುವ ಸೂತ್ರ, ಗ್ರಾಹಕರನ್ನು ಒಲಿಸಿಕೊಳ್ಳುವ ತಂತ್ರಗಾರಿಕೆಗೆ ಸಂಬಂಧಿಸಿದಂತೆ ಮಾತಿನ ಹೊಳೆ ಹರಿಸಿದರು.
ಯಾವುದೇ ಕೆಲಸಕ್ಕೆ ಕೈಹಾಕಿದರೂ ಸಾಧಿಸುವ, ವೈಯಕ್ತಿಕವಾಗಿ ನಾಯಕತ್ವದ ಗುಣಗಳನ್ನು ಸಂಪಾದಿಸುವುದು ಮಾತ್ರವಲ್ಲದೆ, ನಮ್ಮ ಸುತ್ತಲು ಲೀಡರುಗಳನ್ನು ಬೆಳೆಸುವತ್ತ ನಮ್ಮ ಪ್ರಯತ್ನ ಸಾಗುತ್ತಿರಬೇಕು ಎಂದು ಅವರು ಹೇಳಿದರು. ನಮ್ಮ ಅತ್ಯಂತ ಬಿಡುವಿಲ್ಲದ ಸಮಯದಲ್ಲಿಯೂ ಅತ್ಯುತ್ಕೃಷ್ಟ ಕೆಲಸ ಮಾಡಲು ಬೇಕಾದ 8 ತಂತ್ರಗಾರಿಕೆಯ ಗುಟ್ಟನ್ನು ರಾಬಿನ್ ಶರ್ಮಾ ಮನನ ಮಾಡಿಕೊಟ್ಟರು.
ಜಗತ್ತನ್ನು ಬದಲಾಯಿಸಲು ನಾವು ಮಾಡುತ್ತಿರುವ ಕೆಲಸಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ ಎಂದ ಅವರು ನಮ್ಮ ಕಟ್ಟಕಡೆಯ ಜೀವನದ ಕ್ಷಣಗಳಲ್ಲಿ ನಮ್ಮನ್ನು ಬೇರೆಯವರಿಗಿಂತ ವಿಭಿನ್ನವಾಗಿಡುವುದು ನಮ್ಮ ಕರ್ತೃತ್ವವೇ ಎಂಬುದರ ಬಗ್ಗೆ ಚಿಂತನೆಗೆ ಹಚ್ಚಿದರು. ನಾಯಕತ್ವಕ್ಕೆ ಸಂಬಂಧಿಸಿದಂತೆ ಅನೇಕ ಪರಿಕಲ್ಪನೆಗಳು ಇಂದು ಹಳೆಯವಾಗಿದ್ದು, ಅವು ಇಂದು ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿದರು.
ನಾಯಕತ್ವದ ಪರಿಕಲ್ಪನೆ ವಿವರಿಸುವಾಗ ವಾರೆನ್ ಬಫೆಟ್, ಸ್ಟೀವ್ ಜಾಬ್ಸ್, ಮಹಾತ್ಮಾ ಗಾಂಧಿ, ನೆಲ್ಸನ್ ಮಂಡೇಲಾ ಮುಂತಾದವರ ಹೆಸರನ್ನು ಅವರು ಉಲ್ಲೇಖಿಸಿದರು. 'ಅದ್ಭುತ ನಾಯಕತ್ವದ ನಿಯಮಗಳು' ಮುಂತಾದ ವಿಷಯಗಳ ಬಗ್ಗೆ ಅನೇಕ ಆಸಕ್ತಿದಾಯಕ ಸಂಗತಿಗಳನ್ನು ರಾಬಿನ್ ಈ ಸಂದರ್ಭದಲ್ಲಿ ವಿವರಿಸಿದರು.
ಅಲ್ಪಾವಧಿ ಸಾಲ ನೀಡುವ ಮೂಲಕ ಗ್ರಾಮೀಣ ಜನತೆಯನ್ನು ಉದ್ಯಮಿಗಳಾಗಿ ಮುನ್ನಡೆಸಿ, ಅವರ ಜೀವನದಲ್ಲಿಯೂ ಬದಲಾವಣೆ ತರುವಂತಹ ಅತ್ಯಂತ ಪ್ರಶಂಸಾರ್ಹ ಕೆಲಸ ಮಾಡುತ್ತಿರುವ ರಂಗ್ ದೇ ಸಂಸ್ಥೆ ಇಂತಹುದೊಂದು ಅತ್ಯದ್ಭುತ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಸ್ತುತ್ಯರ್ಹ.
ರಂಗ್ ದೇ ಸಿಇಓ ಆಗಿರುವ ರಾಮಕೃಷ್ಣ ಅವರು, "ಭಾರತವನ್ನು ಬಡತನ ನಿರ್ಮೂಲನ ಮಾಡುವುದು ರಂಗ್ ದೇ ಸಂಸ್ಥೆಯ ಹೆಗ್ಗುರಿ. ಇದಕ್ಕಾಗಿ ನಮ್ಮ ಈ ಜೀವನವನ್ನೇ ಮುಡಿಪಾಗಿಡುತ್ತೇವೆ. ನಮ್ಮ ಈ ಉದ್ದೇಶದ ಬಗ್ಗೆ ಜನಜಾಗೃತಿ ಮೂಡಿಸಲು ಮತ್ತು ಈ ಚಳವಳಿಯಲ್ಲಿ ಭಾಗವಹಿಸಲು ಜನರಲ್ಲಿ ಪ್ರೋತ್ಸಾಹ ತುಂಬಲೆಂದು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ರಾಬಿನ್ ಶರ್ಮಾ ಅವರ ಭಾಗವಹಿಸುವಿಕೆಯಿಂದ ನಮ್ಮ ಶ್ರಮ ಮತ್ತು ಉದ್ದೇಶ ಸಾರ್ಥಕವಾಗಿದೆ" ಎಂದು ನುಡಿದರು.