ಶಿವಾಜಿನಗರದ ರಸೆಲ್ ಮಾರ್ಕೆಟ್ ಬೆಂಕಿಗೆ ಆಹುತಿ
ಬೆಂಗಳೂರಿನ ಮಧ್ಯಭಾಗದಲ್ಲಿರುವ ಶಿವಾಜಿನಗರ ಅತ್ಯಂತ ಹಳೆದ ಪ್ರದೇಶಗಳಲ್ಲೊಂದು. ಅದರಲ್ಲೂ ಪಳಿಯುಳಿಕೆಯಂತಿರುವ 80 ವರ್ಷ ಹಳೆಯ ರಸೆಲ್ ಮಾರ್ಕೆಟ್ ಇಂಥದೊಂದು ಅಗ್ನಿ ಅನಾಹುತಕ್ಕೆ ಯಾವಾಗಲೂ ತೆರೆದುಕೊಂಡೇ ಇತ್ತು. ಬೆಂಕಿ ಬಿದ್ದ ಕೂಡಲೆ ಸ್ಥಳಕ್ಕೆ ಧಾವಿಸಿರುವ 25 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.
ಶಿವಾಜಿನಗರದ ಶಾಸಕ ಎಂ. ರೋಶನ್ ಬೇಗ್, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್, ಮೋಟಮ್ಮ ಮುಂತಾದವರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸ್ಥಳಕ್ಕೆ ಭೇಟಿ ನೀಡಿರುವ ಬೆಂಗಳೂರು ಆಯುಕ್ತ ಎಂ.ಕೆ. ಶಂಕರಲಿಂಗೇ ಗೌಡ ಅವರು ನಷ್ಟು ಅನುಭವಿಸಿದ ವ್ಯಾಪಾರಿಗಳಿಗೆ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಅತ್ಯಂತ ಹಳೆಯದಾಗಿರುವ ರಸೆಲ್ ಮಾರ್ಕೆಟ್ನ್ನು ಸಂಪೂರ್ಣ ನೆಲಸಮ ಮಾಡಿ ಹೊಸ ಸಂಕೀರ್ಣ ದೊರಕಿಸಿಕೊಡುವುದಾಗಿ ಭರವಸೆ ನೀಡಲಾಗಿದೆ. ಈ ಕಾರ್ಯವನ್ನು ಸರಕಾರ ಮೊದಲೇ ಮಾಡಬೇಕಾಗಿತ್ತು ಎಂಬುದು ವರ್ತಕರೊಬ್ಬರ ಅಭಿಪ್ರಾಯ. ಇಂದು ಸಂಭವಿಸಿದ ಅಗ್ನಿ ದುರಂತದಿಂದಾಗಿ, ಸರಕಾರ ಬೆಂಕಿ ಬಿದ್ದ ಮೇಲೆ ಬಾವಿ ತೋಡುತ್ತಿರುವಂತಾಗಿದೆ.
ಪರಿಹಾರ ಪ್ರಕಟ : ಈ ಅಗ್ನಿ ದುರಂತದಲ್ಲಿ ನಷ್ಟ ಹೊಂದಿರುವ ಪ್ರತಿ ವ್ಯಾಪಾರಿಗೆ ತಲಾ 50 ಸಾವಿರ ರು. ಪರಿಹಾರ ನೀಡುವುದಾಗಿ ಸರಕಾರ ಘೋಷಿಸಿದೆ. ಇಂದು ಸಂಜೆ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಸ್ಥಳಕ್ಕೆ ಭೇಟಿ ನೀಡಿ, ಮುಂದೆ ಇಂಥ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಇಂಥ ಭರವಸೆಯಿಂದ ನಷ್ಟ ಹೊಂದಿದವರಿಗೆ ಏನು ಪ್ರಯೋಜನ?