ಆರೋಪ ಸಾಬೀತಾದರೆ 7 ವರ್ಷ ಕಠಿಣ ಜೈಲು ಯೋಗ
ಭಾರತೀಯ ದಂಡ ಸಂಹಿತೆ ಪ್ರಕಾರ ವಂಚನೆ, ದಾಖಲೆ ತಿರುಚಿರುವುದು, ನಕಲಿ ದಾಖಲೆ ಸೃಷ್ಟಿಸಿ ಮತ್ತು ಅಪರಾಧಿಕ ಒಳಸಂಚು ನಡೆಸಿದ ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿದೆ. ಖುದ್ದು ಕೇಂದ್ರ ಸರಕಾರದ ಸಚಿವಾಲಯವೊಂದು ರಾಜ್ಯ ಸರಕಾರವೊಂದರ ಸಚಿವರ ವಿರುದ್ಧ ಕೇಸ್ ದಾಖಲಿಸಿರುವುದು ಕರ್ನಾಟಕದ ಮಟ್ಟಿಗೆ ದಾಖಲೆಯೇ ಎನ್ನಬಹುದು.
ಇದರಿಂದಾಗಿ, ತನ್ನನ್ನು ಎದುರು ಹಾಕಿಕೊಂಡಿರುವ ಯೋಗೀಶ್ವರ್ರ ಮೇಲೆ ಮೊಕದ್ದಮೆ ಹೂಡುವಂತೆ ಮಾಡುವಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಸಫಲರಾಗಿದ್ದಾರೆ ಎನ್ನಬಹುದು. ಅತ್ತ ಯಾವ ಸಚಿವಾಲಯ ಯೀಗೀಶ್ವರ್ ವಿರುದ್ಧ ಕೇಸು ದಾಖಲಿಸುವಂತೆ ಮಾಡಿದೆಯೋ ಆ ಖಾತೆಯ ಸಚಿವ ಎಂ ವೀರಪ್ಪ ಮೊಯ್ಲಿ ಮತ್ತು ತಮ್ಮ ರಾಜಕೀಯ ಗುರು, ಕೇಂದ್ರದ ಪ್ರಭಾವಿ ಸಚಿವ ಎಸ್ ಎಂ ಕೃಷ್ಣ ಅವರ ಪ್ರಭಾವ ಇಲ್ಲಿ ಸಾಕಷ್ಟು ಕೆಲಸ ಮಾಡಿದೆ ಎಂದು ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿದೆ.
ಮೆಗಾಸಿಟಿ ಯೋಜನೆಯಡಿ ನಿವೇಶನ ನೀಡುವುದಾಗಿ ಹೇಳಿದ್ದ ಯೋಗೀಶ್ವರ್ 1995-2006ರ ವೇಳೆ ಸುಮಾರು 9 ಸಾವಿರ ಮಂದಿಯಿಂದ 64 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದರು. ಇದರಲ್ಲಿ ಕಂಪನಿಯ 3.60 ಕೋಟಿ ರೂ.ಗಳನ್ನು ಲಪಟಾಯಿಸಿದ್ದಾರೆ ಎಂಬ ಆರೋಪ ಅವರ ಮೇಲಿದೆ.
ಜನರಿಗೆ ಭಾರಿ ವಂಚನೆ ಮಾಡಿರುವ ಯೋಗೀಶ್ವರ್ ಅವರನ್ನು ಮಂತ್ರಿಮಂಡಲದಲ್ಲಿ ಇಟ್ಟುಕೊಳ್ಳುವುದು ಸೂಕ್ತವಲ್ಲ. ಸಂಪುಟದಿಂದ ಅವರನ್ನು ಕೈಬಿಡಬೇಕು. ಯೋಗೀಶ್ವರ್ ಸಚಿವ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಾ ಜಿ. ಪರಮೇಶ್ವರ್ ಈಗಾಗಲೇ ಆಗ್ರಹಿಸಿದ್ದಾರೆ.