ಬಿಜೆಪಿಗೆ ಯಡಿಯೂರಪ್ಪ ಹೊಸ ಡೆಡ್ ಲೈನ್
ಯಡಿಯೂರಪ್ಪ ಬೆಂಬಲಿಗರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಯಡಿಯೂರಪ್ಪ ಅವರ ಹುಟ್ಟುಹಬ್ಬದ ಆಯೋಜನೆ ಕುರಿತು ಚರ್ಚಿಸಲು ನಾವು ಸಭೆ ಸೇರಿದ್ದೆವು. ಫೆ.27ರಂದು ಬಿಎಸ್ ವೈ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.
ಹುಟ್ಟುಹಬ್ಬದ ಕಾರ್ಯಕ್ರಮದ ನಂತರ ಸಭೆ ಬೆಂಬಲಿಗರು ಸಭೆ ಸೇರಿ ಮುಂದಿನ ನಡೆ ಬಗ್ಗೆ ಚರ್ಚಿಸುವುದಾಗಿ ಶಾಸಕ ಬೇಳೂರು ಹೇಳಿದರು.
ಹುಟ್ಟುಹಬ್ಬದ ದಿನದಂದು ಯಡಿಯೂರಪ್ಪ ಬೆಂಬಲಿಗ ಶಾಸಕರೆಲ್ಲರೂ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಮಾ.3ರಂದು ಯಡಿಯೂರಪ್ಪ ಅವರ ಮುಂದಿನ ನಡೆ ಪ್ರಕಟಿಸುತ್ತೇನೆ ಎಂದಿದ್ದಾರೆ. ಈ ಮೂಲಕ ಬಿಜೆಪಿ ಹೈ ಕಮಾಂಡ್ ಗೆ ಯಡ್ಡಿ ಬಣ ಹೊಸ ಡೆಡ್ ಲೈನ್ ವಿಧಿಸಿದೆ.
ಇದಕ್ಕೂ ಮುನ್ನ ಅತ್ತಿಬೆಲೆ ಸಮೀಪದ ಗೆಸ್ಟ್ ಲೈನ್ ಹೋಟೆಲ್ ನಲ್ಲಿ ಎರಡು ದಿನಗಳ ಕಾಲ ನಡೆಯಬೇಕಿದ್ದ ಬಿಜೆಪಿ ಚಿಂತನ ಮಂಥನ ಸಭೆ ನಿತಿನ್ ಗಡ್ಕರಿ ಅವರ ಸುದೀರ್ಘ ಭಾಷಣದೊಂದಿಗೆ ಅರ್ಧ ದಿನಕ್ಕೆ ಮುಕ್ತಾಯ ಕಂಡಿತು.
ಭೂ ಹಗರಣಗಳ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆರೋಪ ಮುಕ್ತರಾಗುವ ತನಕ ಅವರಿಗೆ ಯಾವುದೇ ಮಹತ್ವದ ಸ್ಥಾನ ಕೊಡಲು ಸಾಧ್ಯವಿಲ್ಲ.
ಯಡಿಯೂರಪ್ಪ ನಮ್ಮ ಪಕ್ಷದ ಶಿಸ್ತಿನ ಸಿಪಾಯಿ. ಸದಾನಂದ ಗೌಡರ ಸರ್ಕಾರ ಹಾಗೆ ಮುಂದುವರೆಯಲಿದೆ. ಬಂಡಾಯ ಎದ್ದು ಹೋಗುವ ಶಾಸಕರಿಗೆ ಗುಡ್ ಬೈ ಎಂದು ಗಡ್ಕರಿ ಖಡಕ್ ಆಗಿ ಹೇಳಿದರು. ಪಕ್ಷದ ಹಿರಿಯ ಜೀವಿ ಎಲ್ ಕೆ ಅಡ್ವಾಣಿ ಅವರ ಅಣತಿಯಂತೆ ಮತ್ತೆ ಸಿಎಂ ಆಗುವ ಯಡಿಯೂರಪ್ಪ ಕನಸಿಗೆ ಗಡ್ಕರಿ ತಣ್ಣೀರೆರಚಿದ್ದಾರೆ.
ಮಟಮಟ ಮಧ್ಯಾಹ್ನದ ವೇಳೆ ಗಡ್ಕರಿ ಅವರ ಬಾಯಿಂದ ಬಂದ ಮಾತುಗಳನ್ನು ಅರಗಿಸಿಕೊಳ್ಳಲಾಗದೆ ಯಡಿಯೂರಪ್ಪ ಸೇರಿದಂತೆ ಅವರ ಬೆಂಬಲಿಗರು ಹರಳೆಣ್ಣೆ ಮುಖ ಮಾಡಿಕೊಂಡು ಸುಮ್ಮನಾದರು.
ಚಿಂತನವೂ ಮಂಥನವೂ ಇಲ್ಲದೆ ಮುಗಿದ ಸಭೆಯಿಂದ ಬೇಸರಗೊಂಡ ಯಡ್ಡಿ ಬಣ ಗೋವಾ ರೆಸಾರ್ಟ್ ಕಡೆ ಮುಖ ಮಾಡಿದೆ ಎಂಬ ಸುದ್ದಿಯಿದೆ. ಈ ಮಧ್ಯೆ ಸಭೆ ನಡೆಸಿದ ಶಾಸಕ ಬೇಳೂರು, ಯಡಿಯೂರಪ್ಪ ಅವರ ಹೊಸ ಡೆಡ್ ಲೈನ್ ಬಗ್ಗೆ ಸುಳಿವು ನೀಡಿದ್ದಾರೆ. ಆದರೆ, ಹೈಕಮಾಂಡ್ ಮಾತ್ರ ಉಡುಪಿ-ಚಿಕ್ಕಮಗಳೂರು ಚುನಾವಣೆ ತನಕ ಮತ್ತೆ ಚಿಂತನ ಮಂಥನ ಸಭೆ ನಡೆಸದಿರಲು ನಿರ್ಧರಿಸಿದೆ.