ಹಸುಗೂಸಿಗೆ ಹೃದ್ರೋಗ, ಚಾಚಿಬಂದ ಸಹಾಯಹಸ್ತ
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಮುದ್ದಪ್ಪ ಹಾಗೂ ನಿರ್ಮಲಾ ದಂಪತಿಗಳ ಏಕೈಕ ಮಗ ಶ್ರೀನಿವಾಸ (5 ತಿಂಗಳು) ಹೃದಯ ಸಂಬಂದಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಜೀವನ ನಿರ್ವಹಣೆಗೆ ಕೂಲಿನಾಲಿ ಮಾಡಿಕೊಂಡಿರುವ ಈ ದಂಪತಿಗಳಿಗೆ ತಮ್ಮ ಮಗ ಜೀವ ಹಿಂಡುವ ರೋಗಕ್ಕೆ ತುತ್ತಾಗಿರುವುದು ಆಕಾಶ ಕಳಚಿ ಬಿದ್ದಂತಾಗಿದೆ.
ಹೊಟ್ಟೆಪಾಡಿಗಾಗಿ ಮುಂಬೈ, ಬೆಂಗಳೂರು, ಪೂನಾ, ಅಂತ ಊರೂರು ತಿರುಗುವ ಈ ದಂಪತಿಗಳಿಗೆ ವಾಸಕ್ಕೆ ಒಂದು ಯೋಗ್ಯ ಮನೆ ಹಾಗೂ ಉದ್ಯೋಗವಿಲ್ಲದೆ ಅಲೆಮಾರಿ ಜೀವನ ನಡೆಸುತ್ತಿದ್ದು, ಈಗ ಮಗುವಿನ ಕಾಯಿಲೆ ಅವರನ್ನು ಇನ್ನಷ್ಟು ಕುಸಿಯುವಂತೆ ಮಾಡಿದೆ. ಅಲೆಮಾರಿಗಳಾದ್ದರಿಂದ ರೇಶನ್ ಕಾರ್ಡ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಹಾಗಾಗಿ ಉಚಿತ ವೈದ್ಯಕೀಯ ಸೌಕರ್ಯ ದೊರೆಯದೆ, ಹಣ ಹೊಂದಿಸಲು ಸಾಧ್ಯಾವಾಗದೆ ಕೈ ಸೋತು ಹೋಗಿವೆ ಅಂತಾರೆ ಮಗುವಿನ ತಂದೆ ಮುದ್ದಪ್ಪ.
ಏನಾದರೊಂದು ಗುರುತಿನ ಚೀಟಿ ಇದ್ದರೂ ಸೌಲಭ್ಯ ಸಿಗಲು ಕಷ್ಟ ಪಡುವ ಹೊತ್ತಿನಲ್ಲಿ ಯಾವುದೇ ಗುರುತು ಪತ್ರ ಹೊಂದಿಲ್ಲದ ಕಾರಣ ಸರ್ಕಾರದ ಬಹು ಮುಖ್ಯಯೋಜನೆ ವಾಜಪೇಯಿ ಆರೋಗ್ಯಶ್ರೀ ಯೋಜನೆಯಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಶಿಬಿರದಲ್ಲಿ ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಲಾಗಿದೆ. ಹೊಟ್ಟೆಗೆ ಬೇಕಾಗುವ ಹಿಟ್ಟಿಗಾಗಿ ಪ್ರತಿಕ್ಷಣದ ಅತಂಕ ಎದುರಿಸುವ ಹಂತದಲ್ಲಿರುವ ಈ ದಂಪತಿಗಳಿಗೆ ಸುಮಾರು 1 ಲಕ್ಷ ಖರ್ಚು ಮಾಡಿ ತಮ್ಮ ಮಗನಿಗೆ ಚಿಕಿತ್ಸೆ ಕೊಡಿಸುವುದು ಕನಸಿನ ಮಾತಾಗಿದ್ದು ಯಾರಾದರೂ ದಾನಿಗಳು ಅಥವಾ ಸಂಘಸಂಸ್ಥೆಗಳು ಮುಂದೆ ಬಂದು ಚಿಕಿತ್ಸೆ ವೆಚ್ಚ ಭರಿಸಬೇಕಾಗಿದೆ.
ವೈದ್ಯರೇ ನಿಗದಿ ಪಡಿಸಿದಂತೆ ಇನ್ನೂ ಹದಿನೈದು ದಿನಗಳಲ್ಲಿ ಮಗುವಿಗೆ ಚಿಕಿತ್ಸೆ ನೀಡದಿದ್ದರೆ ಪ್ರಾಣಕ್ಕೆ ಅಪಾಯ. ಇದನ್ನು ಕೇಳುತ್ತಿದ್ದಂತೆ ದಂಪತಿಗಳಿಗೆ ಆಕಾಶವೇ ಕಳಚಿಬಿದ್ದಂತಾಗಿದೆ. ಸಮಾಜ ಸೇವೆಯ ಹೆಸರಿನಲ್ಲಿ ಹುಟ್ಟುಹಬ್ಬದ ಕಟೌಟ್ಗಳನ್ನು ನಿರ್ಮಿಸಿ ಲಕ್ಷಾಂತರ ಖರ್ಚು ಮಾಡಿ ಪುಕ್ಕಟೆ ಪೋಜು ಕೊಡುವ ಪುಡಿರಾಜಕಾರಣಿಗಳು ಇಂತಹ ಕಾಯಿಲೆಯ ಮಗುವಿನ ಆರೋಗ್ಯಕ್ಕೆ ತಗುಲುವ ವೆಚ್ಚ ಭರಿಸುವ ಮನಸ್ಸು ಮಾಡಲಿ ಸಂಘಸಂಸ್ಥೆಗಳು ಉದಾರ ದಾನಿ ಮಾಡಿ ಮಾನವೀಯತೆ ಮೆರೆಯಲಿ.
ಅಮಾನವೀಯವಾಗಿ ದೌರ್ಜನ್ಯಕ್ಕೊಳಗಾಗ ದೆಹಲಿಯ ಬೇಬಿ ಫಾಲಕ್ ಕತೆ ನಿಮಗೆಲ್ಲರಿಗೂ ಗೊತ್ತೇ ಇದೆ. ಸರ್ವ ರೀತಿಯ ಚಿಕಿತ್ಸೆ ದೊರಕಿಯೂ ಬೇಬಿ ಫಾಲಕ್ ಇನ್ನೂ ಜೀವನ್ಮರಣದ ನಡುವೆ ತುಯ್ದಾಡುತ್ತಿದೆ. ಕನಿಷ್ಠ ಈ ಮಗುವಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕಿದರೆ ಮಗು ಬದುಕುಳಿಯುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಜಗತ್ತಿನ ಅತ್ಯುತ್ತಮ ಕ್ರಿಯಾತ್ಮಕ 10 ಕಂಪನಿಗಳಲ್ಲಿ 2ನೇ ಸ್ಥಾನ ಪಡೆದಿರುವ ಮತ್ತು ಭಾರತದಲ್ಲಿ 1ನೇ ಸ್ಥಾನದಲ್ಲಿರುವ ಬೆಂಗಳೂರಿನ ನಾರಾಯಣ ಹೃದಯಾಲಯ ತಾನೇ ಮುಂದೆಬಂದು ಈ ಮಗುವಿನ ರಕ್ಷಣೆಗೆ ಮುಂದಾಗಬಾರದೇಕೆ?
ಇದೀಗ ಬಂದ ಸುದ್ದಿ : ಸುರಪುರದ ಶಾಸಕ ಮತ್ತು ಯಾದಗಿರಿ ಉಸ್ತುವಾರಿ ಸಚಿವ ರಾಜುಗೌಡ ಅವರು ಮಗುವಿನ ಶಸ್ತ್ರಚಿಕಿತ್ಸೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಹಾಗೆಯೆ, ಕೆಲ ಸಂಘಟನೆಗಳೂ ಮುಂದೆಬಂದಿವೆ.