ಕೇರಳದ ಅನಂತ ಸಂಪತ್ತು ಮತ್ತೆ ಸುದ್ದಿಗೆ
ಇತ್ತೀಚೆಗೆ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ಉಪಸ್ಥಿತಿಯಲ್ಲಿ ಪ್ರಾಯೋಗಿಕವಾಗಿ ಮೌಲ್ಯಮಾಪನ ಮತ್ತು ದಾಖಲೀಕರಣ ನಡೆಸಲಾಗಿದ್ದು, ಇದು ಪೂರ್ತಿಯಾಗಲು ತಿಂಗಳುಗಟ್ಟಲೆ ಸಮಯ ಹಿಡಿಯಬಹುದು. ಸಂಪತ್ತಿನ ಅಧಿಕೃತ ಮೌಲ್ಯಮಾಪನ ಮತ್ತು ದಾಖಲೀಕರಣ ಪ್ರಕ್ರಿಯೆ ಫೆ. 20ರಿಂದ ಪ್ರಾರಂಭವಾಗಲಿದೆ ಎಂದು ಸಮಿತಿಯ ಮುಖ್ಯಸ್ಥ ಎಂ.ವಿ. ನಾಯರ್ ಇತ್ತೀಚೆಗೆ ತಿಳಿಸಿದ್ದಾರೆ.
ಸುಪ್ರೀಂಕೊರ್ಟ್ ನೇಮಿಸಿರುವ ವೇಲಾಯುಧನ್ ನಾಯರ್ ನೇತೃತ್ವದ ಪರಿಣತರ ತಂಡಕ್ಕೆ ಇನ್ನೂ ಹಲವು ಕ್ಷೇತ್ರಗಳ ಪ್ರತಿನಿಧಿಗಳು ಸೇರ್ಪಡೆಯಾಗಲಿದ್ದಾರೆ. ಮೌಲ್ಯಮಾಪನ ಮತ್ತು ದಾಖಲೀಕರಣ ಪ್ರಕ್ರಿಯೆಗಾಗಿ ಕೇರಳ ಎಲೆಕ್ಟ್ರಾನಿಕ್ ಕಾರ್ಪೊರೇಶನ್ ಅತ್ಯಾಧುನಿಕ ಸಾಧನ, ಪರಿಕರಗಳನ್ನು ಖರೀದಿಸಿದ್ದು, ಅಮೂಲ್ಯ ಸಂಪತ್ತಿನ ವ್ಯವಸ್ಥಿತ ಮೌಲ್ಯಮಾಪನ ಕ್ಷಿಪ್ರವಾಗಿ ನಡೆಯಲಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ಸಿಬ್ಬಂದಿಗೆ ತರಬೇತಿ ಸಹ ನೀಡಲಾಗಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.
ದೇಗುಲದ ನೆಲಮಾಳಿಗೆಯಲ್ಲಿರುವ ಆರು ರಹಸ್ಯ ಕೊಠಡಿಗಳ ಪೈಕಿ ಐದನ್ನು ತೆರೆದಾಗ ಸಿಕ್ಕಿರುವ ಸಂಪತ್ತನ್ನು ನೋಡಿ ಜಗತ್ತೇ ದಂಗು ಬಡಿದಿದೆ. ಸುಮಾರು 150 ವರ್ಷಗಳಿಂದ ಮುಚ್ಚಿದ್ದ ಈ ಕೊಠಡಿಗಳಲ್ಲಿ ಸಿಕ್ಕಿರುವ ಸಂಪತ್ತಿನ ಈಗಿನ ಮೌಲ್ಯ ಸುಮಾರು 1.5 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ತೆರೆಯಲು ಬಾಕಿಯಿರುವ ಬಿ ಉಗ್ರಾಣದಲ್ಲೂ ಇಷ್ಟೇ ಪ್ರಮಾಣದ ಸಂಪತ್ತು ಇದೆ ಎನ್ನಲಾಗುತ್ತಿದೆ.