ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ 'ದೇವರು' ಆಚಾರ್ಯ ಸಾವಿಗೆ ಗಣ್ಯರ ಕಂಬನಿ

By Prasad
|
Google Oneindia Kannada News

V.S. Acharya (1939-2012)
ಬೆಂಗಳೂರು, ಫೆ. 14 : ಆಡಳಿತ ಪಕ್ಷದಲ್ಲಿದ್ದರೂ ವಿರೋಧ ಪಕ್ಷಗಳಿಂದಲೂ ಸರಳ ಮತ್ತು ಸಜ್ಜನ ರಾಜಕಾರಣಿ ಎಂದು ಹೊಗಳಿಸಿಕೊಂಡಿದ್ದ 'ಅಜಾತಶತ್ರು' ಡಾ. ವಿ.ಎಸ್. ಆಚಾರ್ಯ ಅವರ ನಿಧನಕ್ಕೆ ಕರ್ನಾಟಕದ ರಾಜಕಾರಣಿಗಳೆಲ್ಲ ಕಂಬನಿ ಮಿಡಿದಿದ್ದಾರೆ. ಯಾವುದೇ ಖಾತೆ ಹೊಂದಿದ್ದರೂ ರಾಜ್ಯದ ಹಿತಕ್ಕಾಗಿ, ಅಭಿವೃದ್ಧಿಗಾಗಿ ಯಾವತ್ತೂ ಶ್ರಮಿಸುತ್ತಿದ್ದ ಮತ್ತು ಚಿಂತಿಸುತ್ತಿದ್ದ ಆಚಾರ್ಯ ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ರಾಜಕಾರಣಿಗಳು ಆಚಾರ್ಯ ಅವರ ಸಾವಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಸದಾನಂದ ಗೌಡ : ಅವರು ಸಾವಿನ ವಿಷಯ ತಿಳಿಯುತ್ತಿದ್ದಂತೆ ಮಲ್ಲಿಗೆ ಆಸ್ಪತ್ರೆಗೆ ಧಾವಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಆಚಾರ್ಯ ಸಾವಿಗೆ ಕಣ್ಣೀರುಗರೆದಿದ್ದಾರೆ. "ಬಿಜೆಪಿ ಪಕ್ಷಕ್ಕೆ ಆಚಾರ್ಯ ಅವರು 'ದೇವರಿದ್ದಂತೆ'. ಅವರು ಹಾಕಿಕೊಟ್ಟ ರಾಜನೀತಿ ಪ್ರಾಯಶಃ ಅದ್ಭುತ. ಅವರು ನಮ್ಮೊಟ್ಟಿಗಿಲ್ಲದಿದ್ದರೂ ಅವರ ನಿರಂತರ ಮರ್ಗದರ್ಶನ ಬೇಕೇಬೇಕು. ಅದು ಯಾವ ರೀತಿ ಮತ್ತು ಹೇಗೆ ದೊರೆಯುತ್ತದೋ, ಯಾರ ಮುಖಾಂತರ ದೊರೆಯುತ್ತದೋ ಗೊತ್ತಿಲ್ಲ. ಬಿಜೆಪಿಯ ಎಲ್ಲ ಚುನಾವಣಾ ಪ್ರಣಾಳಿಕೆಗಳನ್ನು ಮಾಡಿದ್ದು ಆಚಾರ್ಯ ಅವರೇ. ಅತ್ಯಂತ ದೊಡ್ಡ ವಸ್ತುವನ್ನು ಇಂದು ಕಳೆದುಕೊಂಡಿದ್ದೇನೆ. ಬಜೆಟ್ ಮಂಡನೆಗಾಗಿ ಹತ್ತು ದಿನಗಳ ಸಮಯ ಕೊಡುತ್ತೇನೆಂದು ಹೇಳಿದ್ದರು. ಸಮಯ ಇನ್ನೆಲ್ಲಿ ಕೊಡುತ್ತಾರೆ" ಎಂದು ಗದ್ಗದಿತರಾಗಿ ಗಳಗಳನೆ ಗೌಡರು ಅತ್ತಿದ್ದಾರೆ.

ಸಿದ್ದರಾಮಯ್ಯ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, "ಆಚಾರ್ಯ ಅವರು ಸಜ್ಜನ ವಿಚಾರವಂತ ರಾಜಕಾರಣಿ, ಸೌಮ್ಯ ಸ್ವಭಾವದ ವ್ಯಕ್ತಿ. ಉಡುಪಿಯಲ್ಲಿ ವೈದ್ಯರಾಗಿದ್ದರೂ ರಾಜಕೀಯ ಪ್ರವೇಶ ಮಾಡಿ ದೀರ್ಘ ಕಾಲ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಕೆಳಮನೆ, ಮೇಲ್ಮನೆಗೆ ಆಯ್ಕೆಯಾಗಿ ಮಂತ್ರಿಯಾಗಿ, ರಾಜ್ಯದಲ್ಲಿ ನಿಸ್ವಾರ್ಥ ಸೇವೆ ಮಾಡಿರುವಂಥ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಆಚಾರ್ಯ ಅವರೂ ಒಬ್ಬರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ" ಎಂದು ಆಚಾರ್ಯ ಅವರ ವ್ಯಕ್ತಿತ್ವವನ್ನು ಹೊಗಳಿದ್ದಾರೆ.

ಪೇಜಾವರ ಶ್ರೀ : ಆಚಾರ್ಯ ಅವರೊಂದಿಗೆ ದೀರ್ಘಕಾಲದ ಒಡನಾಟ ಹೊಂದಿದ್ದ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು, "ಕರ್ನಾಟಕದ ಕರಾವಳಿ ಕಂಡ ಅತ್ಯಂತ ನಿಷ್ಕಳಂಕ ರಾಜಕಾರಣಿ ಆಚಾರ್ಯ ಅವರು. ರಾಜ್ಯದ ಔದ್ಯಮಿಕ ಪ್ರಗತಿಯ ಬಗ್ಗೆ ಸದಾ ಚಿಂತಿಸುತ್ತಿದ್ದರು. ವಿರೋಧ ಪಕ್ಷಗಳು ಕೂಡ ಅವರ ಸೇವೆಯನ್ನು ಶ್ಲಾಘಿಸುತ್ತಿದ್ದವು. ಭಗವಂತ ಅವರ ಕುಟುಂಬದವರಿಗೆ ದುಃಖ ಭರಿಸುವಂಥ ಶಕ್ತಿ ನೀಡಲಿ" ಎಂದು ನುಡಿದಿದ್ದಾರೆ.

ಡಿ.ಎಚ್. ಶಂಕರಮೂರ್ತಿ : ಆಚಾರ್ಯ ಅವರೊಂದಿಗೆ ಹೋಗೋ ಬಾರೋ ಗೆಳೆತನ ಹೊಂದಿದ್ದ ವಿಧಾನಪರಿಷತ್ ಅಧ್ಯಕ್ಷ ಡಿ.ಎಚ್. ಶಂಕರಮೂರ್ತಿ ಅವರು ತಮ್ಮ ಆತ್ಮೀಯ ಗೆಳೆಯನ್ನು ಕಳೆದುಕೊಂಡಿದ್ದಕ್ಕೆ ಕಂಬನಿ ಮಿಡಿದಿದ್ದಾರೆ. "ನಮ್ಮದು ದಶಕಗಳು ಸ್ನೇಹ. ಆತ ನನ್ನನ್ನು ಶಂಕರೂ ಅಂತಲೇ ಕರೆಯುತ್ತಿದ್ದ. ಇನ್ನೂ ಅಷ್ಟು ಆತ್ಮೀಯವಾಗಿ, ಏಕವಚನದಲ್ಲಿ ಕರೆಯುವವರು ಯಾರು?" ಎಂದು ಶಂಕರಮೂರ್ತಿಯವರು ಭಾವುಕರಾಗಿ ಹೇಳಿದ್ದಾರೆ.

ಆರ್ ಅಶೋಕ್ : ಗೃಹ ಸಚಿವ ಆರ್. ಅಶೋಕ್ ಅವರು ಮಾಜಿ ಗೃಹ ಸಚಿವ ವಿ.ಎಸ್. ಆಚಾರ್ಯ ಅವರ ಸಾವಿಗೆ ಅಶ್ರುತರ್ಪಣ ನೀಡಿದ್ದು, "ಅವರ ಸಾವಿನಿಂದ ಬಿಜೆಪಿ ಪಕ್ಷಕ್ಕೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಅತ್ಯಂತ ನೋವಿನ ಸಂಗತಿ. ಅವರು ತೀರಿಹೋಗಿರುವಂಥದ್ದು ನಂಬಲು ಸಾಧ್ಯವಾಗದ ಸಂಗತಿ. ರಾಜಕೀಯದಲ್ಲಿ ಅವರು ಯಡಿಯೂರಪ್ಪನವರಿಗಿಂತ ಹಿರಿಯರಾಗಿದ್ದರು ಮತ್ತು ದಕ್ಷಿಣ ಭಾರತದಲ್ಲಿ ಬಿಜೆಪಿ ಸರಕಾರ ಬರಲು ಸಾಕಷ್ಟು ಶ್ರಮಿಸಿದ್ದರು. ಅವರ ಸಾವು ತೀವ್ರ ದುಃಖ ತಂದಿದೆ" ಎಂದಿದ್ದಾರೆ.

English summary
Political leaders across all parties have shed tears for the death of Dr. Vedavyasa Srinivas Acharya (71). D.V. Sadananda Gowda has said, Acharya was like God to BJP and involved in preparation of all the election manifestos of BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X