ಸಜ್ಜನ ರಾಜಕಾರಣಿ ವಿ.ಎಸ್. ಆಚಾರ್ಯ ಹಠಾತ್ ನಿಧನ
ನಗರದ ನೃಪತುಂಗ ರಸ್ತೆಯಲ್ಲಿರುವ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸುತ್ತಿದ್ದಾಗ ವೇದಿಕೆಯಲ್ಲಿಯೇ ಅವರು ಕುಸಿದುಬಿದ್ದಿದ್ದರು. ಅವರನ್ನು ಕೂಡಲೆ ಕ್ರೆಸೆಂಟ್ ರಸ್ತೆಯಲ್ಲಿರುವ ಮಲ್ಲಿಗೆ ನರ್ಸಿಂಗ್ ಹೋಂಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಚಾರ್ಯ ಅವರು ತೀರಿಕೊಂಡಿದ್ದಾರೆ.
ವಿ.ಎಸ್. ಆಚಾರ್ಯ ಅವರು ಇಂದು ಮಧ್ಯಾಹ್ನವೇ ಮಂಗಳೂರಿನಿಂದ ವಿಮಾನದಲ್ಲಿ ಬೆಂಗಳೂರಿಗೆ ಮರಳಿದ್ದರು. ಅಲ್ಲಿಂದ ನೇರವಾಗಿ ಅವರು ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿ ವೇದಿಕೆ ಏರುವಾಗ ಕುಸಿದುಬಿದ್ದಿದ್ದಾರೆ. ಕೊನೆಗೆ ಮಧ್ಯಾಹ್ನ 1.15ರ ಸುಮಾರಿಗೆ ಅವರು ಅಸುನೀಗಿದರು. ಅವರ ಪಾರ್ಥೀವ ಶರೀರವನ್ನು ರೇಸ್ಕೋರ್ಸ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಇಡಲಾಗಿತ್ತು. ಅಲ್ಲಿ ಅವರಿಗೆ ಸಕಲ ಸರಕಾರಿ ವಂದನೆ ಸಲ್ಲಿಸಲಾಯಿತು. ಎಲ್ಲ ರಾಜಕಾರಣಿಗಳು ಬಂದು ಅಂತಿಮ ನಮನ ಸಲ್ಲಿಸಿದರು. [ನೆನಪಿನ ಪುಟಗಳಲ್ಲಿ ವಿಎಸ್ ಆಚಾರ್ಯ]
ಗಣ್ಯರ ಕಂಬನಿ : ಆಚಾರ್ಯ ಅವರ ಸಾವು ಬಿಜೆಪಿ ಪಾಲಿಗೆ ತುಂಬಲಾರದ ನಷ್ಟ. ಅವರು ಎಲ್ಲ ರಾಜಕಾರಣಿಗಳಿಗೆ ಮಾರ್ಗದರ್ಶಿಗಳಾಗಿದ್ದರು. ಅವರ ಸ್ಥಾನವನ್ನು ತುಂಬುವುದು ಕಷ್ಟಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಕಂಬನಿ ಮಿಡಿದಿದ್ದಾರೆ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಮಲ್ಲಿಗೆ ಆಸ್ಪತ್ರೆಗೆ ಧಾವಿಸಿದ್ದಾರೆ.
ಉಡುಪಿಯಲ್ಲಿ ಅಂತ್ಯ ಸಂಸ್ಕಾರ : ಮಧ್ಯಾಹ್ನ ಆಚಾರ್ಯ ಅವರ ಪಾರ್ಥೀವ ಶರೀರವನ್ನು ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಕೊಂಡೊಯ್ಯಲಾಗುತ್ತಿದೆ. ಅಲ್ಲಿಂದ ರಸ್ತೆಯ ಮುಖಾಂತರ ಉಡುಪಿಗೆ ತೆಗೆದುಕೊಂಡು ಹೋಗಿ, ಬೈಲಕೆರೆಯಲ್ಲಿರುವ ಅವರ ಸ್ವಂತ ನಿವಾಸಕ್ಕೆ ಒಯ್ಯಲಾಗುವುದು. ನಂತರ ಫೆ.14ರ ಸಂಜೆ ಬೀಡಿನಗುಡ್ಡೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶೋಕಾಚರಣೆ : ಆಚಾರ್ಯ ಅವರ ಗೌರವಾರ್ಥವಾಗಿ ರಾಜ್ಯದಲ್ಲಿ ಎರಡು ದಿನಗಳ ಶೋಕಾಚರಣೆ ನಡೆಸಲು ರಾಜ್ಯ ಸರಕಾರ ನಿರ್ಣಯಿಸಿದೆ. ಉಡುಪಿ ಜಿಲ್ಲೆಯಲ್ಲಿ ಎರಡು ದಿನ ಶಾಲಾ ಕಾಲೇಜುಗಳಿಗೆ ರಜಾ ಘೋಷಣೆ ಮಾಡಲಾಗಿದೆ. ಉಡುಪಿಯ ಡಿಸಿ ಕಚೇರಿ 'ರಜತಾದ್ರಿ'ಯಲ್ಲಿ ಸಂಜೆ 5ರಿಂದ 8ರವರೆಗೆ ಸಾರ್ವಜನಿಕರಿಗೆ ಆಚಾರ್ಯ ಅವರ ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆ.