ಫೆ.13ರಿಂದ ಮತ್ತೊಮ್ಮೆ ಲೋಡ್ ಶೆಡ್ಡಿಂಗ್ ಆರಂಭ
ಆದರೆ, ಬೆಂಗಳೂರಿಗೆ ಲೋಡ್ ಶೆಡ್ಡಿಂಗ್ ಭಯ ಇಲ್ಲ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ ಮಣಿವಣ್ಣನ್ ತಿಳಿಸಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ತೋರಣಗಲ್ ನ ಜಿಂದಾಲ್ ಘಟಕ ಪೂರೈಕೆ ಮಾಡುತ್ತಿರುವ 300 ಮೆಗಾವ್ಯಾಟ್ ವಿದ್ಯುತ್ ಸಾಲುತ್ತಿಲ್ಲ.
ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ 210 ಮೆ.ವಾ. ಸಾಮರ್ಥ್ಯದ 6ನೇ ಘಟಕ ಶುಕ್ರವಾರದಿಂದ ಸ್ಥಗಿತವಾಗಿದೆ. ಇದರಿಂದಾಗಿ ಸುಮಾರು 500 ಮೆಗಾವಾಟ್ ವಿದ್ಯುತ್ ಕಡಿಮೆಯಾಗಿದೆ.
ಜಿಂದಾಲ್ ಘಟಕ ಪುನರಾರಂಭವಾಗಲು 4-5 ದಿನ ಬೇಕಾಗುತ್ತದೆ. ಕೊರತೆ ಬೀಳುವ ವಿದ್ಯುತ್ ಅನ್ನು ಬೇರೆ ಮೂಲಗಳಿಂದ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಶುಕ್ರವಾರ ಒಟ್ಟು 173 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಈ ತಿಂಗಳಲ್ಲಿ ಬೇಡಿಕೆ ಪ್ರಮಾಣ 180 ದಶಲಕ್ಷ ಯೂನಿಟ್ಗೆ ಏರಲಿದೆ ಎಂದು ಅಂದಾಜಿಸಲಾಗಿದೆ. ನಿತ್ಯ ಸುಮಾರು 1200 ಮೆಗಾವಾಟ್ ಖರೀದಿ ಮಾಡಲಾಗುತ್ತಿದೆ.
ಪ್ರತಿನಿತ್ಯದ ಬೇಡಿಕೆ ಅಂದಾಜು ಪ್ರಮಾಣ ಗರಿಷ್ಠ 8,000 ಮತ್ತು ಕನಿಷ್ಠ 6,188 ಮೆಗಾವಾಟ್ ಇತ್ತು. ಕೇಂದ್ರದಿಂದ 1,815 ಮೆಗಾವಾಟ್ ವಿದ್ಯುತ್ ಪೂರೈಕೆಯಾಗಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದ 1,329 ಮೆಗಾವಾಟ್ ಉತ್ಪಾದನೆಯಾಗಿದೆ.