ಇರಾನಿ ತಂಡ ಬೆಂ.ಪೊಲೀಸ್ ಬಲೆಗೆ ಬಿದ್ದಿದ್ದು ಹೇಗೆ?
ಬೆಂಗಳೂರಿನ ಪೊಲೀಸರ ತಂಡದಲ್ಲಿದ್ದ 2 ಡಿಸಿಪಿ, 2 ಎಸಿಪಿ, 10 ಇನ್ಸ್ಪೆಕ್ಟರ್, 60 ಮಹಿಳಾ ಪೇದೆಗಳು ದಾಳಿಯಲ್ಲಿ ಭಾಗವಹಿಸಿದ್ದರು. ಇವರಿಗೆ ಬೀದರ್ ಜಿಲ್ಲೆಯ 4 ಇನ್ಸ್ಪೆಕ್ಟರ್ ಗಳು, 3 ಸಬ್ಇನ್ಸ್ಪೆಕ್ಟರ್ ಗಳು, 25 ಪೇದೆಗಳು ಸಾಥ್ ನೀಡಿದ್ದರು. ಬೆಂಗಳೂರಿನ ಪೊಲೀಸ್ ತಂಡ ಖಾಸಗಿ ವಾಹನಗಳಲ್ಲಿ ಆಗಮಿಸಿತ್ತು. ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಎಸ್ಎನ್ ಸಿದ್ದರಾಮಪ್ಪ ಮತ್ತು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಸತೀಶ್ ಕುಮಾರ್ ತಮ್ಮ ತಂಡದ ನೇತೃತ್ವ ವಹಿಸಿದ್ದರು.
ಕೆಲ ಮನೆಗಳಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ನಗದು ಹಣ ಪತ್ತೆಯಾಗಿದೆ. ಮಂಚದ ಮೇಲೆ ಮಲಗಿಕೊಂಡಿದ್ದ ಮಹಿಳೆಯೊಬ್ಬಳು ತನಗೆ ಶಸ್ತ್ರಚಿಕಿತ್ಸೆ ಆಗಿದೆ. ಹೀಗಾಗಿ ಏಳಲು ಸಾಧ್ಯವಿಲ್ಲ ೆಂದು ನಟಿಸಿದಳು. ಮಹಿಳೆಯರು ತಪಾಸಣೆ ನಡೆಸಿದಾಗ ಹಾಸಿಗೆಯ ಕೆಳಗೆ 35 ತೊಲ ಚಿನ್ನ ಪತ್ತೆಯಾಯಿತು. ಈ ತಂಡದಿಂದ ಒಟ್ಟು 2 ಕೋಟಿ ರುಪಾಯಿ ನಗದು, ಆಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನೆಲ್ಲ ಬೆಂಗಳೂರಿಗೆ ಕರೆತರಲಾಗಿದೆ.
ಬೀದರ್ ಇರಾನಿ ಕಾಲೊನಿಯ ಖತರನಾಕ್ ಕಳ್ಳರು ಪಕ್ಕದ ರಾಜ್ಯಗಳಲ್ಲೂ ತಮ್ಮ ಕೈಚಳಕ ತೋರಿದ್ದಾರೆ. ಒಟ್ಟು 200ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕುತೂಹಲದ ಸಂಗತಿಯೆಂದರೆ ಈ ಪಾತಕ ತಂಡ ಸ್ಥಳೀಯವಾಗಿ ಯಾವುದೇ ಅಪರಾಧಗಳಲ್ಲಿ ಭಾಗಿಯಾಗಿಲ್ಲ. ವಾಸ್ತವವಾಗಿ ಇರಾನಿ ಕಾಲೊನಿ ಎಂಬುದು ಶ್ರೀಮಂತ, ಪ್ರತಿಷ್ಠಿತ ಬಡಾವಣೆಯಾಗಿದೆ.