ಪಿತ್ರಾರ್ಜಿತ ಆಸ್ತಿಯಷ್ಟೇ ನನ್ನ ಹೆಸರಿನಲ್ಲಿರುವುದು:ಬನ್ನೂರುಮಠ
ನನ್ನ ಹೆಸರಿನಲ್ಲಿ ನ್ಯಾಯಾಂಗ ಬಡಾವಣೆಯಲ್ಲಿ ಕಾನೂನುಬಾಹಿರವಾಗಿ ನಿವೇಶನ ಹೊಂದಿದ್ದೇನೆ ಎಂಬುದು ಅಪ್ಪಟ ಸುಳ್ಳು. ಅಲ್ಲಿ ನನ್ನ ಹೆಸರಿನಲ್ಲಿರುವ 503/92 ಸಂಖ್ಯೆಯ ನಿವೇಶನ ಕಾನೂನು ಸಮ್ಮತವಾಗಿಯೇ ಪಡೆದಿದ್ದೇನೆ. ಅದು ಬಿಟ್ಟರೆ ಇಡೀ ದೇಶದಲ್ಲಿ ನನ್ನ ಹೆಸರಿನಲ್ಲಿ ಇರುವುದು ನನ್ನ ಪಿತ್ರಾರ್ಜಿತ ಆಸ್ತಿಯೊಂದೇ ಎಂದು ಸ್ಪಷ್ಟಪಡಿಸಿದ್ದಾರೆ.
'ಮಾಧ್ಯಮಗಳಲ್ಲಿ ನನ್ನ ವಿರುದ್ಧ ಬರುತ್ತಿರುವ ವರದಿಗಳಿಂದ ಅತೀವವಾಗಿ ನೊಂದಿದ್ದೇನೆ. ಇದು ಕಾಣದ ಕೈಗಳ ವ್ಯವಸ್ಥಿತ ಪಿತೂರಿ ಅಷ್ಟೇ. ನಾನು ಎಸಗಿರಬಹುದಾದ ಅಕ್ರಮದ ಬಗ್ಗೆ ನನ್ನನ್ನಾಗಲಿ ಅಥವಾ ನ್ಯಾಯಾಂಗ ಬಡಾವಣೆ ಸೊಸೈಟಿಯನ್ನಾಗಲಿ ವಿಚಾರಿಸದೇ ಸುದ್ದಿಗಳು ಬಿತ್ತರವಾಗುತ್ತಿವೆ. ಇದು ಅಕ್ರಮವಲ್ಲ ಎಂದು ಕೋರ್ಟ್ ಈಗಾಗಲೇ ತೀರ್ಪು ನೀಡಿದೆ' ಎಂದು ನ್ಯಾ ಬನ್ನೂರುಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಗೌರವಾನ್ವಿತ ರಾಜ್ಯಪಾಲ ಭಾರದ್ವಾಜ್ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಯು ನಾನು ಪ್ರತಿಕ್ರಿಯಿಸುವುದಕ್ಕೂಲಾಯಕ್ಕಲ್ಲ. ರಾಜಕೀಯಪ್ರೇರಿತರಾಗಿ ಅವರು ಇಂತಹ ಕ್ಷುಲ್ಲಕ ಆರೋಪ ಮಾಡಿದ್ದಾರೆ ಎಂದು ನ್ಯಾ. ಬನ್ನೂರುಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಅಕ್ರಮ ನಿವೇಶನ ಆರೋಪವಷ್ಟೇ ಅಲ್ಲ. ಅದರ ಹೊರತಾಗಿಯೂ ನ್ಯಾ ಬನ್ನೂರುಮಠ ಕಳಂಕಿತರು. ಆದ್ದರಿಂದ ಅವರ ಹೆಸರನ್ನು ಲೋಕಾಯುಕ್ತ ಪೀಠಕ್ಕೆ ತಿರಸ್ಕರಿಸಿರುವುದಾಗಿ' ಭಾರದ್ವಾಜ್ ಹೇಳಿದ್ದರು.