ರೇವ್ ಪಾರ್ಟಿ ವಿರುದ್ಧ ಸಿಡಿದೆದ್ದ ಉಡುಪಿ ಜನತೆ
'ಸ್ಪ್ರಿಂಗ್ ಝೂಕ್" ಅಂತಾರಾಷ್ಟ್ರೀಯ ಉತ್ಸವ ಬಹಳಷ್ಟು ವಿವಾದಕ್ಕೆ ಕಾರಣವಾಗಿದ್ದು, ಅಲ್ಲಿ ವಿದೇಶಿ ಪ್ರವಾಸಿಗರು ಮುಕ್ತವಾಗಿ ನಡೆಸಿದ ಕಾಮಕೇಳಿ, ಅಶ್ಲೀಲ ವೀಡಿಯೊ ತುಣುಕುಗಳು ಇದೀಗ ಬಹಿರಂಗಗೊಂಡಿವೆ. ಮಾಧ್ಯಮಗಳಿಗೆ ಲಭ್ಯವಾಗಿರುವ ವೀಡಿಯೊದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಯಲ್ಲಿಯೇ ವಿದೇಶಿ ಜೋಡಿಯೊಂದು ಮುಕ್ತವಾಗಿ ಕಾಮಕೇಳಿ ನಡೆಸಿ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯಗಳಿವೆ.
ನಾಗರಿಕ ಸಮಿತಿ ಪ್ರತಿಭಟನೆ: ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಅಶ್ಲೀಲತೆ, ಅಸಭ್ಯ ವರ್ತನೆಯನ್ನು ಖಂಡಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಸೋಮವಾರ ಉಡುಪಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಸಂಸ್ಕೃತ ಕಾಲೇಜಿನಿಂದ ಹೊರಟ ಪ್ರತಿಭಟನಾ ಮೆರವಣಿಗೆ ಕನಕದಾಸ ರಸ್ತೆಯಿಂದ ರಥಬೀದಿಗೆ ಆಗಮಿಸಿ, ಶ್ರೀಕೃಷ್ಣಮಠದ ಮಂದೆ ಸಾಗಿತು. ಬಳಿಕ ರಥಬೀದಿಯಲ್ಲಿ ಪ್ರತಿಭಟನೆ ನಡೆಸಿ, ರೇವು ಪಾರ್ಟಿಗೆ ಅವಕಾಶ ಕಲ್ಪಿಸಿದ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಲಾಯಿತು.
ಅಶ್ಲೀಲವಾಗಿ ಬಟ್ಟೆ ಧರಿಸಿದ್ದ ಗೊಂಬೆಯನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಿ, ಬಳಿಕ ಅದಕ್ಕೆ ಭಾರತೀಯ ಸಂಸ್ಕೃತಿಯಂತೆ ಸೀರೆ, ಕುಂಕುಮ, ಬಳೆಗಳನ್ನು ತೊಡಿಸಲಾಯಿತು. ಭಾರತೀಯ ಸಂಸ್ಕೃತಿಯನ್ನು ಉಳಿಸುವಂತೆ ಹಾಗೂ ವಿದೇಶಿ ಸಂಸ್ಕೃತಿಯನ್ನು ವಿರೋಧಿಸುವಂತೆ ಪ್ರತಿಭಟನ ಕಾರರು ಘೋಷಣೆಗಳನ್ನು ಕೂಗಿದರು. ಇದರಲ್ಲಿ ಹರೇ ಕೃಷ್ಣ ಸಂಸ್ಥೆಯ ವಿದೇಶಿ ಮಹಿಳೆಯರು ಕೂಡ ಪಾಲ್ಗೊಂಡರು. ಪ್ರತಿಭಟನೆಯಲ್ಲಿ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ, ರಮಾದೇವಿ, ಪ್ರಭಾ ಶೆಟ್ಟಿ, ಗಣೇಶ್ರಾಜ್ ಸರಳಬೆಟ್ಟು, ಶೈಲಾ ರೈ, ಶಾಂತಿ ಮೊದಲಾದವರು ಉಪಸ್ಥಿತರಿದ್ದರು.
ಶಿರೂರು ಸ್ವಾಮೀಜಿ ಆಕ್ಷೇಪ: ರಮಣೀಯ ಹಾಗೂ ಪವಿತ್ರವಾದ ಸೈಂಟ್ ಮೇರಿಸ್ ದ್ವೀಪವನ್ನು ಉತ್ಸವದ ಹೆಸರಿನಲ್ಲಿ ಹಾಳು ಮಾಡಲಾಗುತ್ತಿದೆ. ಹಣ ಮಾಡುವ ದುರಾಲೋಚನೆಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ವಿಷಾದನೀಯ ಎಂದು ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಈ ವಿಷಯ ತಿಳಿದು ಅಲ್ಲಿನ ವಾಸ್ತವಾಂಶ ತಿಳಿಯಲು ನಿನ್ನೆ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳಿದ್ದೆ. ಆ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಹಾಗೂ ಶಾಸಕ ರಘುಪತಿ ಭಟ್ ಅವರಲ್ಲಿ ಈ ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದೆ. ಜಿಲ್ಲಾಧಿಕಾರಿಗೆ ತನ್ನ ತಪ್ಪಿನ ಬಗ್ಗೆ ಅರಿವಾಗಿರುವುದನ್ನು ಅವರು ಹೇಳಿಕೊಂಡರು ಎಂದರು.
ಗೋಕರ್ಣ, ಹಂಪಿ ಈಗಾಗಲೇ ವಿದೇಶಿಯ ರಿಂದ ಹಾಳಾಗಿದೆ. ಆದರೆ ಈ ಸ್ಥಳ ಹಾಳಾಗ ಬಾರದು. ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರು ದ್ವೀಪಕ್ಕೆ ಭೇಟಿ ನೀಡುವುದರಿಂದ ಅಲ್ಲಿ ಅಶ್ಲೀಲತೆಗೆ ಅವಕಾಶ ಕೊಡಬಾರದು ಎಂದು ಶಿರೂರು ಸ್ವಾಮೀಜಿ ತಿಳಿಸಿದರು.