ಗಾಂಧಿಬಜಾರ್: ಸಿಎಂ ಸದಾನಂದಗೌಡ ಏನನ್ನುತ್ತಾರೆ?
ಟ್ಯಾಗೂರ್ ವೃತ್ತದಿಂದ ಡಿವಿಜಿ ರೋಡ್ ವರೆಗೆ ಗಾಂಧಿಬಜಾರ್ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಫುಟ್ ಪಾತ್ ಮತ್ತು ರಸ್ತೆಯನ್ನೂ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಜತೆಗೆ ಇಂತಹ ವ್ಯಾಪಾರಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿತ್ತು. ರಸ್ತೆಯ ಅತಿಕ್ರಮಣದಿಂದಾಗಿ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗುತ್ತಿತ್ತು. ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ರಸ್ತೆ ಬದಿಯ ಚರಂಡಿಗಳಲ್ಲಿ ಕಸ ತುಂಬಿಕೊಳ್ಳುವುದು ನಡೆಯುತ್ತಿತ್ತು. (ಗಾಂಧಿಬಜಾರ್ ಹೂ ಮಾರುಕಟ್ಟೆಗಳ ಧ್ವಂಸ'ದ ಸಮಗ್ರ ಚಿತ್ರಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)
ಹೀಗಾಗಿ ಸಾರ್ವಜನಿಕರು ಮತ್ತು ಸಂಚಾರಿ ಪೊಲೀಸ್ ಇಲಾಖೆ ಸಹ ಆಗಾಗ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಪಾಲಿಕೆಗೆ ಪತ್ರ ಬರೆಯುತ್ತಿದ್ದರು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ಆದೇಶ ಸಹ ಇರುವುದರಿಂದ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವುದು ಅನಿವಾರ್ಯವಾಯಿತು ಎಂದು ಸಿಎಂ ಸದಾನಂದಗೌಡ ಹೇಳಿದರು.
ಸದಸ್ಯ ಆರ್ ವಿ ವೆಂಕಟೇಶ್ರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಬೀದಿ ವ್ಯಾಪಾರಿಗಳು ತನ್ನ ಕಚೇರಿಗೆ ಬಂದು ಮನವಿಪತ್ರ ಸಲ್ಲಿಸಿದ್ದಾರೆ. ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮುಂದುವರಿಸಲು ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಅವರ ಬದುಕಿಗೆ ನೆರವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.