ರಾಜ್ಯದ ವಿದ್ಯುತ್ ಕೊರತೆಯನ್ನು ನೀಗುವಳೆ ಶರಾವತಿ?
ಶರಾವತಿ ವಿದ್ಯುದಾಗಾರಕ್ಕೆ ನೀರನ್ನು ಪೂರೈಸುವ ಕಾಲುವೆ ರಿಪೇರಿ ಕಾಮಗಾರಿ ಮುಕ್ತಾಯವಾಗಿದೆ. 22 ಕೋಟಿ ರು. ವೆಚ್ಚದಲ್ಲಿ ನ.17, 2011ರಿಂದ ದುರಸ್ತಿ ಕಾಮಗಾರಿ ಆರಂಭವಾಗಿತ್ತು. ಮೊದಲ ಹಂತದ ಕೆಲಸ ಫೆ.15ರವರೆಗೆ ಮುಗಿಯಲಿದೆ. ಎರಡನೇ ಹಂತದ ಕಾಮಗಾರಿ 2012ರ ನವೆಂಬರ್ನಲ್ಲಿ ಆರಂಭವಾಗಲಿದೆ ಮತ್ತು 2013ರ ಫೆಬ್ರವರಿಯಲ್ಲಿ ಮುಗಿಯಲಿದೆ.
ವಿದ್ಯುತ್ ಉತ್ಪಾದನೆ ಸರಾಗವಾಗಿ ಆರಂಭವಾದರೆ ಈ ಕಾರ್ಖಾನೆಯಲ್ಲಿ ಪ್ರತಿದಿನ ಸರಾಸರಿ 23 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಆಗಲಿದೆ. ಅಲ್ಲದೆ, ಜಿಲ್ಲೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ನೀರಿನ ಸಂಗ್ರಹ ಇರುವುದರಿಂದ ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆಗೆ ಅಷ್ಟೊಂದು ಕಡಿಮೆಯಾಗಲಾರದು ಎಂದು ಶರಾವತಿ ಹೈಡ್ರೋ-ಎಲೆಕ್ಟ್ರಿಕ್ ಯೋಜನೆಯ ಇಂಜಿನಿಯರ್ ಹನುಮಂತಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಈ ಬಾರಿ ಸಾಕಷ್ಟು ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಕಲ್ಲಿದ್ದಲು ಪೂರೈಕೆ ಕೊರತೆ ಹಿನ್ನೆಲೆಯಲ್ಲಿ ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಲ್ಲಿಯೂ ವಿದ್ಯುತ್ ಉತ್ಪಾದನೆ ಸಮರ್ಪಕವಾಗಿ ಆಗುತ್ತಿಲ್ಲ. ವಿದ್ಯುತ್ ಕೊರತೆ ಒಂದೆಡೆಯಾದರೆ, ವಿದ್ಯುತ್ ಬೆಲೆ ಏರಿಕೆ ಜನಸಾಮಾನ್ಯರನ್ನು ಆತಂಕಕ್ಕೀಡು ಮಾಡಿದೆ. ಏಪ್ರಿಲ್ ತಿಂಗಳಲ್ಲಿ ವಿದ್ಯುತ್ ದರ ಮತ್ತೆ ಏರುವ ಸಾಧ್ಯತೆಯಿದೆ.