ಐಐಟಿ ಕೆಲಸಕ್ಕೆ ಇಸ್ರೋ ಮಾಧವನ್ ರಾಜೀನಾಮೆ
ಕೇಂದ್ರ ಸರಕಾರದ ಅಧೀನದಲ್ಲಿರುವ ಪಟನಾ ಐಐಟಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಮಾಧವನ್ ಶನಿವಾರ ರಾಜೀನಾಮೆ ನೀಡಿದ್ದಾರೆ. ಸರಕಾರದಿಂದ ನನಗೆ ಯಾವುದೇ ಆದೇಶ ಪತ್ರ ತಲುಪಿಲ್ಲ. ಆದರೂ ಬಹಿರಂಗವಾಗಿ ಮಾಧ್ಯಮಗಳ ಮೂಲಕ ವಿಷಯ ತಿಳಿದಿದೆ. ಆದ್ದರಿಂದ ರಾಜೀನಾಮೆ ನೀಡಿರುವೆ ಎಂದು ಮಾಧವನ್ ತಿಳಿಸಿದ್ದಾರೆ. ಶುಕ್ರವಾರವೇ ಅವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
ಹಗರಣದ ತನಿಖಾ ವರದಿ ಮತ್ತು ನನ್ನನ್ನು ಸರಕಾರಿ ಉದ್ಯೋಗದಿಂದ ನಿರ್ಬಂಧಿಸಿ ಸರಕಾರ ಹೊರಡಿಸಿರುವ ಆದೇಶ ಪ್ರತಿಯನ್ನು ಕೋರಿ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿರುವೆ. ಅದನ್ನು ಅಧ್ಯಯಿಸಿ, ಮುಂದಿನ ನಿರ್ಧಾರ ಕೈಗೊಳ್ಳುವೆ ಎಂದು ಮಾಧವನ್ ಸ್ಪಷ್ಟಪಡಿಸಿದರು.
ಇಸ್ರೋನ ಅಂಗಸಂಸ್ಥೆಯಾದ ಆಂಟ್ರಿಕ್ಸ್ ಮತ್ತು ದೇವಾಸ್ ಮಲ್ಟಿಮೀಡಿಯಾ ಎಂಬ ಖಾಸಗಿ ಸಂಸ್ಥೆ ನಡುವೆ ನಡೆದಿರುವ ಸ್ಪೆಕ್ಟ್ರಂ ಒಪ್ಪಂದದಿಂದ ಸರಕಾರದ ಬೊಕ್ಕಸಕ್ಕೆ 2,00,000 ಕೋಟಿ ರು. ನಷ್ಟ ಸಂಭವಿಸಿದೆ ಎಂದು ಮಹಾಲೆಕ್ಕ ಪರಿಶೋಧಕ ಸಂಸ್ಥೆ (ಸಿಎಜಿ) ತಿಳಿಸಿತ್ತು. ಹಗರಣ ನಡೆದ ಸಂದರ್ಭದಲ್ಲಿ ಮಾಧವನ್ ಇಸ್ರೋ ಅಧ್ಯಕ್ಷಾರಾಗಿದ್ದರು.