ಅವೆನ್ಯೂರಸ್ತೆ: ದೇವರೇ,ಇದು ಸುಳ್ಳು ಸುದ್ದಿಯಾಗಲಿ!
ಆದರೆ ಪೊಲೀಸರಿಗೆ ಇದನ್ನೆಲ್ಲ ಸಹಿಸಲಾಗಿಲ್ಲ. ಯಾರೇ ಆಗಲಿ ಇನ್ಮುಂದೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಗಿಳಿದರೆ ಟ್ರಾಫಿಕ್ ಜಾಮ್ ಕಾಡಬಾರದು. ಜನ ನರಕ ಅನುಭವಿಸಬಾರದು ಎಂಬ ಸದುದ್ದೇಶದೊಂದಿಗೆ ಪೊಲೀಸರು ಈ ಭಾಗವನ್ನು ಅಕ್ಷರಶಃ ನರಕವನ್ನಾಗಿ ಪರಿವರ್ತಿಸಲು ನಿರ್ಧರಿಸಿಯಾಗಿದೆ!
ಏನಪಾ ಅಂದರೆ ಹೋಗಿ ಹೋಗಿ ಅವೆನ್ಯೂ ರೋಡಿನಲ್ಲಿ ಬಿಎಂಟಿಸಿ ಬಸ್ಸುಗಳನ್ನು ಓಡಾಡುವುದಕ್ಕೆ ಅನುಮತಿ ನೀಡಿದ್ದಾರೆ ಬೆಂಗಳೂರು ಟ್ರಾಫಿಕ್ ಪೊಲೀಸರು. 10 ದಿನಗಳ ಹಿಂದೆ ವಕೀಲರು ಮೈಸೂರು ಬ್ಯಾಂಕ್ ವೃತ್ತವನ್ನು ಹೈಜಾಕ್ ಮಾಡಿದಾಗ ಅನಿವಾರ್ಯವಾಗಿ ಬಿಎಂಟಿಸಿ ಬಸ್ಸುಗಳು ಕೆಆರ್ ಮಾರುಕಟ್ಟೆಯಿಂದ ಅವೆನ್ಯೂ ರೋಡ್ ಮೂಲಕ ಮೆಜೆಸ್ಟಿಕ್ ತಲುಪಿಕೊಂಡಿವೆ.
ಆ ಸಂದರ್ಭದಲ್ಲಿ ಯಾವ ಪುಣ್ಯಾತ್ಮನಿಗೆ ಈ ಐಡಿಯಾ ಬಂತೋ, ಹೌದಲ್ವಾ ಇದನ್ನು ಹೀಗೇ ಮುಂದುವರಿಸಿದರೆ ಹೇಗೆ? ಎಂದು ಆಲೋಚಿಸಿ, ಇದೀಗ 2 ದಿನಗಳಿಂದ ಬಿಎಂಟಿಸಿ ಬಸ್ಸುಗಳು ೀ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಓಡಾಡಲಾರಂಭಿಸಿವೆ!
ಅನೇಕ ದಶಕಗಳಿಂದ ಈ ರಸ್ತೆಯಲ್ಲಿ ಬಸ್ಸುಗಳು ಓಡಾಡಿದ್ದೇ ಇಲ್ಲ! ಕಾರಣ ಇದೊಂದು ಶುದ್ಧ ವ್ಯಾಪಾರಿ ರಸ್ತೆ. ಇಲ್ಲಿ ಜನ-ದನ ಓಡಾಡೋಕ್ಕೇ ಆಗೊಲ್ಲ. ಅಂಥಾದ್ದರಲ್ಲಿ ಬಸ್ಸುಗಳಲ್ಲಿ ಓಡಾಡುವ ಮಾತು ಎಲ್ಲಿಯದು ಅಂತ ಅತ್ಯಂತ ಔಚಿತ್ಯಪೂರ್ಣವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ಮುಂದಿನ ವಾರದಿಂದ ಈ ರಸ್ತೆಯಲ್ಲಿ ಮತ್ತೆ ಬಸ್ಸು ಸಂಚರಿಸಲಿದೆ. ಯಾವುದಕ್ಕೇ ಆಗಲಿ ನೀವು ಇನ್ಮುಂದೆ ಅವೆನ್ಯೂ ರಸ್ತೆಯತ್ತ ಹೆಜ್ಜೆ ಹಾಕಬೇಡಿ, ಹುಷಾರು!