ಪಂಕ್ತಿಭೇದ ಭೋಜನ: ಉಡುಪಿ ರಥಬೀದಿಗೆ ಮುತ್ತಿಗೆ
ಗುರುವಾರ ( ಜ 26) ಮಧ್ಯಾಹ್ನ ಎರಡು ಗಂಟೆಗೆ ಸಿಪಿಐ (ಎಂ) ಮುಖಂಡ ಮತ್ತು ಮಾಜಿ ಶಾಸಕ ಶ್ರೀರಾಮ ರೆಡ್ಡಿ ನೇತ್ರತ್ವದಲ್ಲಿ ಉಡುಪಿ ಅಜ್ಜರಕಾಡು ಗಾಂಧೀ ಮೈದಾನದಿಂದ ಸಾವಿರಾರು ಸಂಖ್ಯೆಯಲ್ಲಿ ಕವಿಮುದ್ದಣ್ಣ ಮಾರ್ಗದ ಮೂಲಕ ತೆರಳಿದ ಕಾರ್ಯಕರ್ತರು ಸಂಸ್ಕೃತ ವಿದ್ಯಾಲಯದ ಮೂಲಕ ರಥಬೀದಿ ಆವರಣ ಪ್ರವೇಶಿಸಲು ಮುಂದಾದಾಗ ಪೋಲೀಸರು ಅವರಿಗೆ ತಡೆಯೊಡ್ಡಿದರು. ಆದರೆ ಸಿಪಿಐ ಕಾರ್ಯಕರ್ತರು ಬ್ಯಾರಿಕೇಡ್ ಭೇದಿಸಿ ಮುನ್ನಗಲು ಮುಂದಾದಾಗ ಪೋಲೀಸರು ಪ್ರತಿಭಟನಾಕಾರರನ್ನು ತಡೆಯುವಲ್ಲಿ ಯಶಸ್ವಿಯಾದರು.
ಆದರೆ ರಸ್ತೆ ಮಧ್ಯದಲ್ಲೇ ಪ್ರತಿಭಟನೆಗೆ ಕೂತ ಸಿಪಿಐ ಕಾರ್ಯಕರ್ತರು ಇನ್ನು ಮುಂದೆ ಶ್ರೀಕೃಷ್ಣ ಮಠದಲ್ಲಿ ಪಂಕ್ತಿಭೇದ ಮಾಡುವುದಿಲ್ಲ ಎಂದು ಅಷ್ಟ ಮಠಗಳು ಆಶ್ವಾಸನೆ ನೀಡಿದರೆ ಮಾತ್ರ ಧರಣಿ ನಿಲ್ಲಿಸುವುದಾಗಿ ಪಟ್ಟು ಹಿಡಿದರು. ಆದರೆ ಪರ್ಯಾಯ ಸೋದೆ ಮಠದಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದ ಕಾರಣ ಪೋಲೀಸರು ಅವರ ಜೊತೆಗೆ ಮಾತುಕತೆಗೆ ಮುಂದಾದರು. ಪೋಲೀಸರ ಮನವಿಗೆ ಪ್ರತಿಭಟನಾಕಾರರು ಸೊಪ್ಪು ಹಾಕದೆ ಇದ್ದಾಗ ಅವರನ್ನೆಲ್ಲಾ ಭಂದಿಸಲಾಯಿತು.
ಕೊಪ್ಪಳ, ಶಿವಮೊಗ್ಗ, ಬಳ್ಳಾರಿ, ರಾಯಚೂರು, ಗುಲ್ಬರ್ಗ ಮುಂತಾದ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಿಪಿಐ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.