ಚಿಲ್ರೆ ಅಭಾವ ಅಂತ ಮುಂಬೈ ವರ್ತಕರು ಮಾಡಿದ್ದೇನು?
ಅದಕ್ಕಾಗಿ ದಕ್ಷಿಣ ಮುಂಬೈ ವರ್ತಕರು ವಿನೂತನ ಕ್ರಮ ಅಳವಡಿಸಿಕೊಂಡಿದ್ದು 1 ಮತ್ತು 2 ರೂ. ಮುಖಬೆಲೆಯ ತಮ್ಮದೇ ಚಿಲ್ಲರೆ ನಾಣ್ಯಗಳನ್ನು ಟಂಕಿಸಿದ್ದಾರೆ ಮತ್ತು ತಮ್ಮೊಳಗೆ ಅದನ್ನು ಚಲಾವಣೆಗೆ ಇಳಿಸಿದ್ದಾರೆ. ಆದರೆ ಇದು ವಿವಾದಕ್ಕೆ ಗುರಿಯಾಗಿದ್ದು, ಈ ವ್ಯವಸ್ಥೆ ಕಾನೂನುಬಾಹಿರ ಎಂಬ ಕೂಗು ಎದ್ದಿದೆ.
ಈ ನಾಣ್ಯಗಳು ಅಕ್ರಮವಲ್ಲ, ಏಕೆಂದರೆ ಅವು ಪ್ರಸರಣದಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ದೃಢೀಕೃತ ನಾಣ್ಯಗಳ ನಕಲಿಯಲ್ಲ ಎಂದು ಕಿರಾಣಿ ಅಂಗಡಿ ಮಾಲಕ ಅಸ್ಲಾಂ ಶೇಖ್ ಹೇಳುತ್ತಾರೆ. ಆದರೆ ಅವರವರ ಅನುಕೂಲಕ್ಕೆ ಪರ್ಯಾಯ ಹಣಕಾಸು ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ಈ ಮಧ್ಯೆ ಆರ್ ಬಿಐ ಏನು ಮಾಡುತ್ತಿದೆ ಎಂದು ಪ್ರಜ್ಞಾವಂತ ಜನ ಕೇಳುವಂತಾಗಿದೆ.
ವರ್ತಕರ ಒಂದು ಸಂಘವಾದ ದ ಮಾಂಡ್ವಿ-ಕೋಳಿವಾಡ್ ಎಸೋಸಿಯೇಶನ್ ಒಂದು ಬದಿಯಲ್ಲಿ ಎಂಕೆಎ ಲಾಂಛನ ಹಾಗೂ ಇನ್ನೊಂದು ಬದಿಯಲ್ಲಿ ಮುಖಬೆಲೆ ಹೊಂದಿರುವ ನಾಣ್ಯಗಳನ್ನು ಟಂಕಿಸಿದೆ. ಈತನಕ 1 ಮತ್ತು 2 ರೂ. ಮುಖಬೆಲೆಯ ಸುಮಾರು 50,000 ನಾಣ್ಯಗಳನ್ನು ಟಂಕಿಸಲಾಗಿದೆ ಮತ್ತು ಭೆಂಡಿ ಬಜಾರು ಹಾಗೂ ಮಸ್ಜಿದ್ ಬಂದರುಗಳ ಸಗಟು ಮಾರುಕಟ್ಟೆಗಳಲ್ಲಿ ಇವು ಚಲಾವಣೆಯಲ್ಲಿವೆ.
ವರ್ತಕರು ನಾಣ್ಯಗಳ ತೀವ್ರ ಅಭಾವವನ್ನು ಎದುರಿಸುತ್ತಿದ್ದಾರೆ ಮತ್ತು ಅವುಗಳ ಯದ್ವಾತದ್ವಾ ಕಾಳಸಂತೆಯಿಂದಾಗಿ ನಾವು ಈ ನಾಣ್ಯಗಳನ್ನು ಬಳಸುವುದು ಅನಿವಾರ್ಯವಾಯಿತು ಎಂದು ಅವರು ಹೇಳುತ್ತಾರೆ. ಕಾಳಸಂತೆಯಲ್ಲಿ 1 ರೂಪಾಯಿಯ 100 ನಾಣ್ಯಗಳಿಗೆ 114 ರೂ. ತೆರಬೇಕಾಗಿದೆ. 2 ರೂಪಾಯಿಯ 50 ನಾಣ್ಯಗಳಿಗೆ 115 ರೂ., 5 ರೂಪಾಯಿಯ 20 ನಾಣ್ಯಗಳಿಗೆ 118 ರೂ. ದರವಿದೆ.
ಈ ದರಗಳು ಬದಲಾಗುತ್ತಿರುತ್ತವೆ. ಹಬ್ಬದ ವೇಳೆ 100 ರೂ. ನಾಣ್ಯಗಳಿಗೆ 125 ರೂ.ವರೆಗೂ ಕಕ್ಕಬೇಕಾಗುತ್ತದೆ ಎಂದು ಮತ್ತೊಬ್ಬ ವರ್ತಕ ಹೇಳುತ್ತಾರೆ.