ಮಾರ್ಕೆಟ್ ಧ್ವಂಸ; ಪುರಾತನ ಮರಗಳನ್ನೂ ಕಡಿದು ಹಾಕಿ
ಪೊಲೀಸರ 'ಮಾಮೂಲು' ವಿಷ್ಯಾ ಏನೇ ಇರಬಹುದು. ಆದರೆ ನಿಜಕ್ಕೂ ಅವರೂ ನಿಟ್ಟುಸಿರುಬಿಟ್ಟಿದ್ದಾರೆ. 'ಯಾವಾಗ್ಲೋ ಈ ಕೆಲಸ ಆಗಬೇಕಿತ್ತು. ತುಂಬಾ ರಫ್ಫು ಇಲ್ಲಿನ ಅಂಗಡಿಗವರು. ನಮಗೂ ಸಾಕಾಗಿ ಹೋಗಿತ್ತು. ಏನ್ಮಾಡೋಣ, ಸದ್ಯ ಈಗ್ಲಾದರೂ ನೆಲಸಮವಾಯಿತಲ್ಲಾ. ಪಾಲಿಕೆಯವರು ಸರಿಯಾದ ಕೆಲಸವನ್ನೇ ಮಾಡಿದ್ದಾರೆ' ಎನ್ನುತ್ತಾರೆ ಬಸವನಗುಡಿ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು. ಅವರ ಮಾತುಗಳಲ್ಲೇ ಕೇಳಿ:
ಮುಂದೆ ಏನ್ಮಾಡಬೇಕು ಅಂದರೆ ಈ ಅಂಗಡಿಗಳನ್ನು ನೆಲಸಮ ಮಾಡಿದಂತೆ ಅವುಗಳಿಗೆ ಆಸರೆಯಾಗಿರುವ ನಾಲ್ಕಾರು ಬೃಹತ್ ಮರಗಳನ್ನೂ ಕಡಿದು ಹಾಕಬೇಕು. ಇವು ಟ್ರಾಫಿಕ್ ಗೆ ಅಡ್ಡಲಾಗಿ ಅಂಗಡಿಗಳಿಗೆ ಆಸರೆಯಾಗಿ ಬೇರುಬಿಟ್ಟಿವೆ. ನೂರಾರು ವರ್ಷಗಳ ಈ ಮರಗಳನ್ನು ಕಡಿದುಹಾಕಿದರೆ ಅರ್ಧ ಕೆಲಸ ಸಲೀಸಾದೀತು.
ಟ್ರಾಫಿಕ್ ಸಂಚಾರಕ್ಕೆ ಮತ್ತಷ್ಟು ಜಾಗ ಸಿಗುತ್ತದೆ. ಯಾವಾಗ ಟ್ರಾಫಿಕ್ ಜಾಸ್ತಿ ಆಗುತ್ತೋ ಆಗ ಅಂಗಡಿಗಳವರು ರೋಡಿಗೆ ಬರುವುದಕ್ಕೆ ಹಿಂಜರಿಯುತ್ತಾರೆ. ಅಂಗಡಿಗಳವರು ಆ ಮರಗಳಿಗೆ ಮೊಳೆ ಹೊಡೆದು ತಮ್ಮ ಹಕ್ಕು ಸ್ಥಾಪಿಸುವುದೂ ತಪ್ಪುತ್ತದೆ.
ಹೌದು, ನಮ್ಮ ಪೊಲೀಸ್ ಸಾಹೇಬರು ಹೇಳಿದ್ದೂ ಸರಿ ಅನ್ನಿಸುತ್ತಿದೆ. ಮೊದಲು ಆ ಕಾರ್ಯವಾಗಲಿ. ಆದರೆ ಈ ಪರಿಸರವಾದಿಗಳು ರಗಳೆ ತೆಗೆಯದಿರಲಿ ಎಂದು ಆಶಿಸೋಣ. ಸುವಿಶಾಲ ರಸ್ತೆಗಳನ್ನು ಕಾಣೋಣ.