ರಾಜ್ಯಪಾಲರು 'ದೇವತಾ ಮನುಷ್ಯ' ಅಂದಿದ್ದು ಯಾರಿಗೆ?
ಇದೇನಿದು ಯಾವಾಗಲೂ ಸರಕಾರದ ಜತೆ ಹಾವು ಮುಂಗಿಸಿಯಂತೆ ಕಿತ್ತಾಡುತ್ತಿರುವ ರಾಜ್ಯಪಾಲ ಭಾರದ್ವಾಜ್ ಬಾಯಲ್ಲಿ ಇಂತಹ ಒಳ್ಳೆಯ ಮಾತುಗಳೂ ಬರುತ್ತವಾ ಎಂದು ಹುಬ್ಬೇರಿಸಬೇಡಿ. ಆದರೆ ಅವರಿಗೂ ಗೊತ್ತು ಸರಕಾರದಲ್ಲಿ ಯಾರು, ಏನು, ಎತ್ತ ಅಂಥಾ ಅಲ್ವೆ!
ಇಷ್ಟಕ್ಕೂ ಯಾರಪ್ಪಾ ಅಂಥಾ 'ದೇವತಾ ಮನುಷ್ಯ' ಅಂದ್ರೆ none other than ಕರ್ನಾಟಕದ ಚೀಫ್ ಸೆಕ್ರೆಟರಿ S.V. Ranganath!. ಆದರೆ ಘನ ರಾಜ್ಯಪಾಲರು ಈ ರೀತಿ ಸರ್ಟಿಫಿಕೇಟ್ ಕೊಟ್ಟಿರುವುದರಲ್ಲಿ ಎಳ್ಳಷ್ಟೂ ಉತ್ಪೇಕ್ಷೆಯಿಲ್ಲ ಎಂಬುದು ಸಾಧು ಸ್ವಭಾದ ರಂಗನಾಥ್ ಅವರನ್ನು ಹತ್ತಿರದಿಂದ ಬಲ್ಲ ಯಾರಿಗೇ ಆಗಲಿ ಗೊತ್ತಾಗುತ್ತದೆ. ಇಂತಿಪ್ಪ ಎಸ್ ವಿ ರಂಗನಾಥರು 1975ನೇ ಸಾಲಿನ ಐಎಎಸ್ ಅಧಿಕಾರಿ.
ಕಳೆದ ಮೂರು ದಶಕಗಳಿಂದ ಕರ್ನಾಟಕದಲ್ಲೇ ಹೆಚ್ಚಾಗಿ ತಮ್ಮ ಪಾದ ಸವೆಸಿರುವ, ನಾಡಿನ ಸಪ್ತ ಮುಖ್ಯಮಂತ್ರಿಗಳನ್ನು ಹತ್ತಿರದಿಂದ ಕಂಡಿರುವ ಎಸ್ ವಿ ರಂಗನಾಥ್, ನಾಡು ಕಂಡ ಬೆರಳಿಕೆಯಷ್ಟು ದಕ್ಷ, ಪ್ರಾಮಾಣಿಕ ಐಎಎಸ್ ಗಳ ಪೈಕಿ ಮೊದಲಿಗರಾಗಿ ನಿಲ್ಲುತ್ತಾರೆ.
ಅಷ್ಟಕ್ಕೂ ಈ ನಿಸ್ಪೃಹ ಅಧಿಕಾರಿಯನ್ನು ರಾಜ್ಯಪಾಲರು 'ದೇವತಾ ಮನುಷ್ಯ' ಅಂದಿದ್ದು ಯಾರ ಮುಂದೆ ಅಂದುಕೊಂಡಿರಿ? ಅದೇ ನಮ್ಮ ಕಾನೂನು ಸಚಿವ ಸುರೇಶ್ ಕುಮಾರ್ ಅವರೆದುರು. ಅದರಿಂದಲೇ ಈ 'ದೇವತಾ ಮನುಷ್ಯ' ಸರ್ಟಿಫಿಕೇಟಿಗೆ ಮತ್ತಷ್ಟು ಮೌಲ್ಯ ಬಂದಿರುವುದು. ಏಕೆಂದರೆ ಸುರೇಶ್ ಕುಮಾರ್ ಗೆ ಗೊತ್ತು - ಎಸ್ ವಿ ರಂಗನಾಥ್ ಎಂಥ ಅಧಿಕಾರಿ, ಅದಕ್ಕಿಂತ ಎಂಥಾ (ದೇವತಾ) ಮನುಷ್ಯ ಎಂದು. ಮೂರ್ನಾಲ್ಕು ವರ್ಷಗಳ ಹಿಂದೆ ಎಸ್ ವಿ ರಂಗನಾಥರ ಪತ್ನಿ ಈ ಲೋಕದ ಜಂಜಡದಿಂದ ಶಾಶ್ವತವಾಗಿ ಮುಕ್ತಿ ಪಡೆದಾಗ ಇದೇ ಸುರೇಶ್, ರಂಗನಾಥರ ಬಗ್ಗೆ ಅಂದಿನ ನಂ. 1 ದಿನಪತ್ರಿಕೆಯಲ್ಲಿ ಆತ್ಮೀಯ ಲೇಖನ ಬರೆದಿದ್ದರು.
ಹೌದು. ಇಂದಿನ ಭ್ರಷ್ಟ ಮಹಾಮಹಿಮರ ಮಧ್ಯೆ ವಿಧಾನಸೌಧದ ಹಣೆಬರಹವಾದ 'ಸರಕಾರದ ಕೆಲಸ ದೇವರ ಕೆಲಸ' ಎನ್ನುವುದನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ಒಬ್ಬ ಸಜ್ಜನ ಅಧಿಕಾರಿ ಎಸ್ ವಿ ರಂಗನಾಥ್.
ಖಾಸಗಿ ಬದುಕಿನಲ್ಲಿ ಅಪಾರ ನೋವುಂಡಿರುವ, ಸುಖ ಏನೆಂಬುದನ್ನೇ ಪರಿಚಯಿಸಿಕೊಳ್ಳದ, ಪತ್ನಿಯ ಸೇವೆಯ ಬಳಿಕ, ಎದಯೆತ್ತರ ಬೆಳೆದುನಿಂತ ಮಗನ ಸೇವೆಯನ್ನು ಇಂದಿಗೂ ಪಾಲಿಸುತ್ತಿರುವ ಶುದ್ಧ ಅಂತಃಕರಣದ ಅಪ್ಪ. ಎಸ್ ವಿ ರಂಗನಾಥ್ ಎಂದಿಗೂ ತಮ್ಮ ಮನೆಯ ನೋವನ್ನು ಕಚೇರಿವರೆಗೂ ತಮ್ಮೊಂದಿಗೆ ಕೊಂಡೊಯ್ಯದೆ ಕಚೇರಿ ಕೆಲಸದಲ್ಲಿ ಅಹಿರ್ನಿಶಿ ದುಡಿಯುತ್ತಾ, ಇಂದು ಖುದ್ದು ರಾಜ್ಯಪಾಲರಿಂದಲೇ 'ದೇವತಾ ಮನುಷ್ಯ' ಅನಿಸಿಕೊಂಡಿದ್ದಾರೆ. ರಂಗನಾಥ್ ಸರ್, ನಿಮ್ಮಂತಹವರ ಸೇವೆ ನಾಡಿಗೆ ಇನ್ನೂ ಬೇಕು. ನಿಮ್ಮಂತಹವರ ಸಂಖ್ಯೆ ನೂರ್ಮಡಿಸಲಿ ಎಂದು ಆಶಿಸುತ್ತಾ ...