ಯಡಿಯೂರಪ್ಪ ಆದರು 'ಮ್ಯಾನೇಜ್ಮೆಂಟ್ ಗುರು'
ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಹಾಗೂ ಇನ್ಸ್ಟಿಟ್ಯೂಟ್ ಆಫ್ ಇಂಟರನ್ಯಾಷನಲ್ ಮ್ಯಾನೇಜ್ಮೆಂಟ್ ಸ್ಟಡೀಸ್ ನಾಳೆ ಸೋಮವಾರ (ಜ. 23) ನಗರದಲ್ಲಿ ಆಯೋಜಿಸಿರುವ ವಿಚಾರ ಸಂಕಿರಣವೊಂದರಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಯಡಿಯೂರಪ್ಪ ಉಪನ್ಯಾಸ ನೀಡಲಿದ್ದಾರೆ. ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟ ಲಾಲು ಪ್ರಸಾದ್ ಯಾದವ್ ಅವರ ಸಾಲಿಗೆ ಈಗ ಯಡಿಯೂರಪ್ಪ ಕೂಡ ಸೇರಲಿದ್ದಾರೆ.
ಶೋಭಾ, ನಿರಾಣಿ ಸಾಥ್ : 'ನಾಯಕತ್ವದ ಆರಂಭ ಮತ್ತು ಅನುಭವ' ಕುರಿತು ವಿದ್ಯಾರ್ಥಿಗಳೊಂದಿಗೆ ನಡೆಯುವ ಸಂವಾದದಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಗಮನಾರ್ಹವೆಂದರೆ ಈ ವಿಚಾರ ಸಂಕಿರಣದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮುರುಗೇಶ ನಿರಾಣಿ ಅವರು ಯಡಿಯೂರಪ್ಪಗೆ ಸಾಥ್ ನೀಡಲಿದ್ದಾರೆ.
ನಗರದ 30ಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿಗಳು ಬೆಳಿಗ್ಗೆ 10 ಗಂಟೆಯಿಂದ ನಡೆಯುವ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳಲಿದ್ದು 'ಸ್ಪಷ್ಟ ಕನ್ನಡ' ಬಲ್ಲವರಿಗೆ ಮಾತ್ರ ಸಂವಾದದಲ್ಲಿ ಪಾಲ್ಗೊಳ್ಳಲು ಅವಕಾಶ. ಈ ವಿಚಾರ ಸಂಕಿರಣದಲ್ಲಿ ಸಂಸದ ಪಿಸಿ ಮೋಹನ್, ವಿಟಿಯು ಉಪಕುಲಪತಿ ಎಚ್. ಮಹೇಶಪ್ಪ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಪ್ರಾಂಶುಪಾಲ ಈರಪ್ಪ ತಿಳಿಸಿದ್ದಾರೆ.