ಪಂಚ ರಾಜ್ಯ ಚುನಾವಣೆ: ರವಿಶಂಕರ ಗುರೂಜಿ ಪ್ರಚಾರ ಇಲ್ಲ
ಅಣ್ಣಾ ಹಜಾರೆ ಅವರು ಅನಾರೋಗ್ಯ ನಿಮಿತ್ತ ಪ್ರಚಾರದಿಂದ ಹಿಂದೆ ಸರಿದಿದ್ದರೂ ಅಣ್ಣಾ ತಂಡ ಚುನಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರ ವಿರೋಧಿ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಆದರೆ ರವಿಶಂಕರ ಗುರೂಜಿ ಅವರು ಐದೂ ರಾಜ್ಯಗಳಲ್ಲಿ ತಾವು ಯಾವುದೇ ಪಕ್ಷದ ವಿರುದ್ಧ ಪ್ರಚಾರ ನಡೆಸುವುದಿಲ್ಲ ಎಂದು ಶನಿವಾರ ಇಲ್ಲಿ ಹೇಳಿದ್ದಾರೆ.
'ಚುನಾವಣೆಗಳಲ್ಲಿ ಪ್ರಚಾರ ನಡೆಸುವುದು ರಾಜಕೀಯ ಪಕ್ಷಗಳ ಕೆಲಸ. ಇದು ನಮ್ಮ ಕೆಲಸವಲ್ಲ. ಆದರೆ ಜನರು ಭ್ರಷ್ಟಾಚಾರದ ವಿರುದ್ಧ ನಡೆಸುವ ಚಳವಳಿಯನ್ನು ತಾವು ಬೆಂಬಲಿಸುವುದಾಗಿ ಬೋಧಗಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರಿಗೆ ಅವರು ತಿಳಿಸಿದರು.
'ತಾವು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರೊಂದಿಗಿರುವ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ತಮಗೆ ಸಂಘ ಪರಿವಾರದ ಬೆಂಬಲಿಗನ ಹಣೆಪಟ್ಟಿ ಹಚ್ಚಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರವಿಶಂಕರ್, ಆರೆಸ್ಸೆಸ್ ನಾಯಕರೊಂದಿಗೆ ಕಾಣಿಸಿಕೊಳ್ಳುವವರೆಲ್ಲ ಸಂಘದ ವ್ಯಕ್ತಿಗಳೆನ್ನುವುದು ದಿಗ್ವಿಜಯ್ ಅವರ ಅಭಿಪ್ರಾಯವಿರಬಹುದು' ಎಂದು ಮಾರ್ಮಿಕವಾಗಿ ನುಡಿದರು.