ನಾಯಂಡಹಳ್ಳಿ ರಸ್ತೆ ಸುರಂಗ ಎಂಬ ನಿತ್ಯ ನರಕ
ಜ.20ರ ಶುಕ್ರವಾರ ಅಂಡರ್ ಪಾಸ್ನಲ್ಲಿ ಬೆಳಕಿನ ಕೊರತೆಯಿಂದಾಗಿ ಒಂದು ಅಪಘಾತ ಸಂಭವಿಸಿ ಓರ್ವ ಸಾವಿಗೀಡಾಗಿದ್ದ. ಸಿಮೆಂಟ್ ತುಂಬಿದ್ದ ಲಾರಿ ಡಿಕ್ಕಿ ಹೊಡೆದು ಒಂದು ಸಾವಿನ ಜೊತೆ 12 ವಾಹನಗಳು ಜಖಂ ಆಗಿದ್ದವು. ತಪ್ಪಿಸಿಕೊಂಡಿರುವ ಲಾರಿ ಚಾಲಕನ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ.
ನಾಗರಬಾವಿಯಿಂದ ಬಂದು ನಾಯಂಡಹಳ್ಳಿ ಜಂಕ್ಷನ್ ಕೂಡುವಲ್ಲಿರುವ ಅಂಡರ್ ಪಾಸ್ ನಿರ್ಮಾಣವೇ ಕಳಪೆಯಾಗಿದೆ. ಅಲ್ಲಿ ನಾಲ್ಕು ದಾರಿಗಳಿದ್ದರೂ ಎರಡೂ ಯಾವಾಗಲೂ ರಿಪೇರಿಯಲ್ಲಿರುತ್ತವೆ. ಹೀಗಾಗಿ ವಾಹನದಟ್ಟಣೆ ಯಾವಾಗಲೂ ಇದ್ದದ್ದೆ. ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಸೂಕ್ತವಾಗಿಲ್ಲದೆ ಸುರಂಗದಲ್ಲಿ ಸಾಗಿದಂತೆ ವಾಹನ ಚಾಲಕರಿಗೆ ಭಾಸವಾಗುತ್ತದೆ.
ಪ್ರತಿದಿನ ಸೂರ್ಯ ಮುಳುಗಿದ ಮೇಲೆ ನಾಯಂಡಹಳ್ಳಿ ಜಂಕ್ಷನ್ ದಾಟುವುದು ಪ್ರತಿ ಸಂಚಾರಿಗೆ ಯಮಯಾತನೆಯ ಸಂಗತಿ. ಇನ್ನು ಪೊಲೀಸರ ಪಾಡಂತೂ ಕೇಳುವುದೇ ಬೇಡ. ಇಡೀ ದಿನ ವಾಹನ ಸಂಚಾರ ನಿಯಂತ್ರಿಸುವ ಹೊತ್ತಿಗೆ ಸಂಜೆಯಾಗುತ್ತಿದ್ದಂತೆ ಹೈರಾಣಾಗಿರುತ್ತಾರೆ.
ಸರಿಯಾದ ಬೆಳಕಿನ ವ್ಯವಸ್ಥೆ ನೀಡಬೇಕೆಂದು ಪೊಲೀಸರು ಸಾಕಷ್ಟು ದೂರು ನೀಡಿದ್ದರೂ ಬಿಡಿಎ ಕಿವಿಯ ಮೇಲೆ ಹಾಕಿಕೊಂಡಿರಲಿಲ್ಲ. ಇದರಿಂದಾಗಿ ನಾಯಂಡಹಳ್ಳಿ ಜಂಕ್ಷನ್ನಿನಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ನಮ್ಮ ಮೆಟ್ರೋ ನಿರ್ಮಾಣ ಕೂಡ ಈ ಸಂಕಷ್ಟಗಳಿಗೆ ನೀರು ಸುರಿದಿದೆ.