ಎಸ್ಎಂ ಕೃಷ್ಣ, ಎಚ್ ಡಿ ಕುಮಾರಸ್ವಾಮಿ ರಾಜೀನಾಮೆ?
ತಮಾಷಿಯೆಂದರೆ ಎಸ್ ಎಂ ಕೃಷ್ಣ ಅವರು ವಿದೇಶಾಂಗ ಸಚಿವ ಸ್ಥಾನದಂತಹ ಆಯಕಟ್ಟಿನ ಮತ್ತು ಪ್ರಭಾವಿ ಸ್ಥಾನದಲ್ಲಿ ಇರುವುದರಿಂದ ತನಿಖೆಗೆ ಭಂಗ ತಾರದಂತೆ ಅವರು ತಕ್ಷಣ ರಾಜೀನಾಮೆ ಸಲ್ಲಿಸಬೇಕು ಎಂದು ಜೆಡಿ ಎಸ್ ವಕ್ತಾರ ವೈಎಸ್ ವಿ ದತ್ತಾ ಆಗ್ರಹಿಸಿದ್ದಾರೆ. ಆದರೆ ದತ್ತಾ ಅವರು ತಮ್ಮದೇ ಪಕ್ಷದ ಕುಮಾರಸ್ವಾಮಿ ಅವರ ಬಗ್ಗೆ ದಿವ್ಯ ಮೌನ ವಹಿಸಿದ್ದಾರೆ. ಸಂಸತ್ ಸದಸ್ಯರಾಗಿರುವ ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿಲ್ಲ.
ನೈತಿಕ ಹೊಣೆ ಹೊತ್ತು ಕೃಷ್ಣ ಮತ್ತು ಕುಮಾರಸ್ವಾಮಿ ತಕ್ಷಣ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಈ ಮಧ್ಯೆ, ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ಎಚ್ ಡಿಕೆ ಪರ ವಕೀಲರು ತಿಳಿಸಿದ್ದಾರೆ.
ಇದೇ ರೀತಿ, ಅಕ್ರಮ ಗಣಿಗಾರಿಕೆ ಪ್ರಕರಣ ಕುರಿತು ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಜ.17ರಂದು ವಜಾಗೊಳಿಸಿ ತನಿಖೆ ನಡೆಸಲು ಆದೇಶ ನೀಡಿದೆ. ಇದರಿಂದಾಗಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳು ಮತ್ತು ಹಾಲಿ ಕೇಂದ್ರ ಸಚಿವ ಎಸ್ಸೆಂ ಕೃಷ್ಣ ವಿರುದ್ಧದ ತನಿಖೆ ಅಬಾಧಿತವಾಗಿ ನಡೆಯಲಿದೆ.