ಗೌಡರ ಮಧ್ಯಸ್ಥಿಕೆಯಲ್ಲಿ ಉಡುಪಿಮಠ ಜಗಳ ಇತ್ಯರ್ಥ
ಪುತ್ತಿಗೆ ಶ್ರೀಗಳ ಅನುಪಸ್ಥಿತಿಯಲ್ಲಿ ಜೋಡುಕಟ್ಟೆ ವೃತ್ತದಿಂದ ಅತ್ಯಂತ ವಿಜೃಂಭಣೆಯಿಂದ ಆರಂಭವಾದ ಪರ್ಯಾಯ ಮೆರವಣಿಗೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಭಾಗವಹಿಸಿದ್ದರು. ರಾಜ್ಯದ ವಿವಿಧ ಕಲೆಗಳನ್ನು ಬಿಂಬಿಸುವ ಟ್ಯಾಬ್ಲೋಗಳು, ವೀರಗಾಸೆ, ಡೊಳ್ಳು ಕುಣಿತ, ಹುಲಿವೇಷ, ಯಕ್ಷಗಾನ ಮುಂತಾದವುಗಳು ಜನರನ್ನು ರಂಜಿಸಿದವು. ಅಷ್ಟಮಠದಲ್ಲಿ 7ಮಠದ ಯತಿಗಳು, ಸಿಎಂ ಸದಾನಂದ ಗೌಡ, ಸಚಿವ ರಾಮದಾಸ್, ವಿ ಎಸ್ ಆಚಾರ್ಯ, ಜಿಲ್ಲೆಯ ಶಾಸಕರುಗಳು ಈ ಭವ್ಯ ಮೆರವಣಿಗೆಗೆ ಸಾಕ್ಷಿಯಾದರು.
ಅನಂತೇಶ್ವರ, ಚಂದ್ರಮೌಳೀಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿದ ಸೋದೆಶ್ರೀಗಳು ಕೃಷ್ಣ ಮಠ ಪ್ರವೇಶಿಸಿ ಶ್ರೀಕೃಷ್ಣ, ಮುಖ್ಯಪ್ರಾಣ, ಗರುಡ ದೇವರಿಗೆ ಮತ್ತು ಭೋಜನಶಾಲೆಯಲ್ಲಿರುವ ಮುಖ್ಯಪ್ರಾಣನಿಗೆ ಪೂಜೆ ಸಲ್ಲಿಸಿದ್ದಾರೆ. ಹಿರಿಯ ಯತಿಗಳ ಆಶೀರ್ವಾದ ಪಡೆದ 21 ವರ್ಷ (ಮಾರ್ಚ್ 1991ರಲ್ಲಿ ಜನನ) ವಯಸ್ಸಿನ ಸೋದೆ ಶ್ರೀಗಳು ಮಠದ ಆವರಣದ ಬಡಗುಮಾಲೆಯಲ್ಲಿ ಇತರ ಧಾರ್ಮಿಕ ವಿಧಿವಿಧಾನ ಪೂರೈಸಿದ್ದಾರೆ.
ಪರ್ಯಾಯ ದರ್ಬಾರ್ ನಡೆಯುತ್ತಿದ್ದು ಪುತ್ತಿಗೆ ಶ್ರೀಗಳ ಜೊತೆ ಅದಮಾರು ಶ್ರೀಗಳು ಇದರಲ್ಲಿ ಭಾಗವಹಿಸದೇ ಇರುವುದು ಅಷ್ಟಮಠಗಳಲ್ಲಿ ಎಲ್ಲವೂ ಸರಿಯಿಲ್ಲ ಇನ್ನುವ ಭಾವನೆ ಭಕ್ತಾದಿಗಳಲ್ಲಿ ಮೂಡಿದೆ.
ಉಪವಾಸ: ಮಂಗಳವಾರ (ಜ 17) ರಾತ್ರಿ ಪುತ್ತಿಗೆ ಮತ್ತು ಪೇಜಾವರ ಶ್ರೀಗಳು ತಾವು ನಡೆಸುತ್ತಿದ್ದ ಉಪವಾಸವನ್ನು ಕೈಬಿಟ್ಟಿದ್ದಾರೆ. ಅನಂತೇಶ್ವರ ಆವರಣದಲ್ಲಿ ಉಪವಾಸ ಕೂತಿದ್ದ ಪುತ್ತಿಗೆ ಶ್ರೀಗಳ ಜೊತೆ ಮಾತುಕತೆ ನಡೆಸಿದ ಸಿಎಂ ಸದಾನಂದ ಗೌಡ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಪುತ್ತಿಗೆ ಶ್ರೀಗಳು ಉಪವಾಸ ಕೈಬಿಟ್ಟ ಬೆನ್ನಲ್ಲೇ ಪೇಜಾವರ ಶ್ರೀಗಳು ಉಪವಾಸ ಹಿಂತೆಗೆದು ಕೊಂಡಿದ್ದಾರೆ.