ಉಡುಪಿ ಮಠಗಳು 8 ; ಜಿಜ್ಞಾಸೆಗಳು 108
ಪ್ರಾರಂಭದಲ್ಲಿ ಈ ಎಂಟು ಪೀಠಾಧಿಪತಿಗಳು ಶ್ರೀ ಕೃಷ್ಣ ಮಠದಲ್ಲಿ ಒಟ್ಟಾಗಿ ಇದ್ದು ಪರಸ್ಪರ ಚರ್ಚೆ ಮತ್ತು ಒಪ್ಪಿಗೆಯಿಂದ ತಮ್ಮ ಧಾರ್ಮಿಕ ಕರ್ತವ್ಯಗಳನ್ನು ಹಂಚಿಕೊಳ್ಳುತ್ತಿದ್ದರು. ಪ್ರತಿಯೊಂದು ಮಠಕ್ಕೆ ಎರಡು ತಿಂಗಳಿನ ಮಟ್ಟಿಗೆ ಶ್ರೀ ಕೃಷ್ಣನ ಪೂಜೆಯ ಜವಾಬ್ದಾರಿ ಜಾರಿಗೆ ಬಂದಿತು. ಶ್ರೀ ಮಧ್ವಾಚಾರ್ಯರಿಂದ ಪ್ರಾರಂಭವಾದ ಎರಡು ತಿಂಗಳ ಅಧಿಕಾರದ ಅವಧಿ ಗುರುಗಳಾದ ಶ್ರೀ ವಾದಿರಾಜರ ಕಾಲದವರೆಗೂ ನಡೆದು ಬಂತು. ಶತಮಾನಗಳ ಹಿಂದೆ ಶ್ರೀವಾದಿರಾಜರು ಮಠಗಳ ಅಧಿಕಾರದ ಅವಧಿಯನ್ನು ಎರಡು ತಿಂಗಳಿನಿಂದ ಎರಡು ವರ್ಷಕ್ಕೆ ವಿಸ್ತರಿಸಿದರು. ಒಂದು ಮಠದಿಂದ ಇನ್ನೊಂದು ಮಠಕ್ಕೆ ಆಗುವ ಅಧಿಕಾರದ ಹಸ್ತಾಂತರವೇ ಪರ್ಯಾಯ ಮಹೋತ್ಸವ.
ಕೃಷ್ಣನ ಪೂಜಾಧಿಕಾರ ಪಡೆದಿರುವ ಅಷ್ಟಮಠಗಳೆಂದರೆ ಅದಮಾರು, ಕೃಷ್ಣಾಪುರ, ಪೇಜಾವರ, ಪುತ್ತಿಗೆ, ಶಿರೂರು, ಸೋದೆ, ಕಾಣಿಯೂರು ಮತ್ತು ಫಲಿಮಾರು. ಇದಲ್ಲದೆ ಉಡುಪಿ ರಥಬೀದಿ ಆವರಣದಲ್ಲಿರುವ ಇತರ ಐದು ಮಠಗಳಿವೆ. ಅವು ಯಾವುದೆಂದರೆ ಭಂಡಾರಕೇರಿ ಮಠ, ವ್ಯಾಸರಾಯ ಮಠ, ಭೀಮನಕಟ್ಟೆ ಮಠ, ಉತ್ತರಾದಿ ಮಠ ಮತ್ತು ರಾಘವೇಂದ್ರ ಸ್ವಾಮಿ ಮಠ.
ನಾಳೆ ಬುಧವಾರ ( ಜ 18) ನಡೆಯಲಿರುವ ಪರ್ಯಾಯ ಮಹೋತ್ಸವದಲ್ಲಿ ಸೋದೆ ಶ್ರೀಗಳು, ಶಿರೂರು ಶ್ರೀಗಳಿಂದ ಅಧಿಕಾರ ಪಡೆಯಲಿದ್ದಾರೆ. ಪರ್ಯಾರ್ಯ ಪೀಠವನ್ನೇರಲಿರುವ ಶ್ರೀಗಳು ಸರ್ವಜ್ಞ ಪೀಠವನ್ನೇರುವ ಮುನ್ನ ಎಲ್ಲಾ ಅಷ್ಟ ಮಠಗಳಿಗೆ ಭೇಟಿ ನೀಡಿ ಅಲ್ಲಿಯ ಪಟ್ಟದ ದೇವರಿಗೆ ಪೂಜೆ ನಡೆಸಿ ಪರ್ಯಾಯಕ್ಕೆ ಆಹ್ವಾನಿಸುವುದು ಪರ್ಯಾಯ ಸಂಪ್ರದಾಯದ ಪದ್ಧತಿ.
ಪರ್ಯಾಯದ ದಿನದಂದು ಅಂದರೆ ಜನವರಿ 18 ರಂದು ಪೀಠವನ್ನೆರಲಿರುವ ಶ್ರೀಗಳು ಬೆಳಗಿನ ಜಾವ (ಮಧ್ಯರಾತ್ರಿ ಕಳೆದು) ಎರಡು ಗಂಟೆಗೆ ಉಡುಪಿ ಹೊರವಲಯದಲ್ಲಿರುವ ದಂಡ ತೀರ್ಥದಲ್ಲಿ ಸ್ನಾನ ಮಾಡಿ ಉಡುಪಿ ಜೋಡುಕಟ್ಟೆ ವೃತ್ತದಲ್ಲಿ ಬಂದು ಸೇರುತ್ತಾರೆ. ಅಲ್ಲಿಂದ ರಥಬೀದಿಯವರೆಗೆ ಮೆರವಣಿಗೆಯಲ್ಲಿ ಬಂದು ಕನಕನಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿ, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ದರ್ಶನ ಮಾಡಿ ಕೃಷ್ಣ ಮಠ ಪ್ರವೇಶಿಸುತ್ತಾರೆ. ಅಲ್ಲಿ ಗರ್ಭಗುಡಿಯಲ್ಲಿ ಪೂಜೆ ಮಾಡಿದ ನಂತರ ಮುಖ್ಯಪ್ರಾಣ ದೇವರಿಗೆ ಪೂಜೆ ಸಲ್ಲಿಸಿ ಸರ್ವಜ್ಞ ಪೀಠವೇರುತ್ತಾರೆ. ಅಲ್ಲಿ ನಿರ್ಗಮಿಸುವ ಶ್ರೀಗಳು ಅಕ್ಷಯ ಸಟ್ಟುಗ ಮತ್ತು ಮಠದ ಕೀಲಿಕೈಯನ್ನು ಹಸ್ತಾಂತರಿಸುತ್ತಾರೆ. ಇದು ಪರ್ಯಾಯದ ವಿಧಿ ವಿಧಾನ.
ಪ್ರಸಕ್ತ ವಿವಾದ: ಪರ್ಯಾಯ ರಾಯಸ (ಆಮಂತ್ರಣ) ದಲ್ಲಿ ಅಷ್ಟ ಮಠಗಲ್ಲಿ ಒಂದಾದ ಪುತ್ತಿಗೆ ಶ್ರೀಗಳನ್ನು ಕೈಬಿಡಲಾಗಿತ್ತು. ಹಾಗೆಯೇ ಸಂಪ್ರದಾಯದಂತೆ ಅವರನ್ನು ಮಠಕ್ಕೆ ಹೋಗಿ ಆಹ್ವಾನಿಸಿರಲಿಲ್ಲ. ಇದರಿಂದ ಬೇಸತ್ತ ಪುತ್ತಿಗೆ ಶ್ರೀಗಳು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿಕೆ ನೀಡಿ ಹಿರಿಯ ಪೇಜಾವರ ಶ್ರೀಗಳ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದರು.
ಪುತ್ತಿಗೆ ಶ್ರೀಗಳ ಹೇಳಿಕೆಗೆ ಬೇಸತ್ತ ಪೇಜಾವರ ಶ್ರೀಗಳು ಪುತ್ತಿಗೆ ಶ್ರೀಗಳ ಉಪವಾಸಕ್ಕೆ ಪ್ರತಿ ವಿರೋಧವಾಗಿ ತಾನೂ ಉಪವಾಸ ಕೂರುವುದಾಗಿ ಹೇಳಿಕೆ ನೀಡಿದ್ದಾರೆ. ಪರ್ಯಾಯ ಪೀಠವನ್ನೇರಲಿರುವ ಸೋದೆ ಮಠದ ಪ್ರಕಾರ ಮಧ್ವ ಸಂಪ್ರದಾಯದ ಪ್ರಕಾರ ಸೀಮೋಲ್ಲಂಘನೆ ಮಾಡುವಂತಿಲ್ಲ. ಆದರೆ ಪುತ್ತಿಗೆ ಶ್ರೀಗಳು ಇದಕ್ಕೆ ವಿರೋಧವಾಗಿ, ಓವರ್ ಸೀಸ್ ಟ್ರಾವೆಲ್ ಮಾಡಿದ್ದಕ್ಕಾಗಿ ಅವರನ್ನು ಪರ್ಯಾಯ ಮಹೋತ್ಸವದಿಂದ ಬಹಿಷ್ಕರಿಸಿರುವುದು ಇವತ್ತಿನ ಜಿಜ್ಞಾಸೆಗೆ ಕಾರಣ.