ಉಡುಪಿ ಪರ್ಯಾಯ ವಿವಾದ: ಪೇಜಾವರ ಶ್ರೀಗಳೇ ಎಲ್ಲಿದ್ದೀರಿ?
ಪರ್ಯಾಯ ಮಹೋತ್ಸವಕ್ಕೆ ಆಮಂತ್ರಣ ನೀಡಲು ಭಾನುವಾರ (ಜ 15) ಸಂಜೆ ಐದು ಗಂಟೆಯವರೆಗಿನ ಗಡುವು ನೀಡಿದ್ದ ಪುತ್ತಿಗೆ ಶ್ರೀಗಳು ಆಮಂತ್ರಣ ಇನ್ನೂ ಬರದಿರುವ ಹಿನ್ನಲೆಯಲ್ಲಿ ನಾಳೆ (ಜ 17) ಬೆಳಗ್ಗೆ 9 ಗಂಟೆಯಿಂದ ಬುಧವಾರ ( ಜ 18) ಮುಂಜಾನೆ ಐದು ಗಂಟೆಯವರೆಗೆ ರಥಬೀದಿ ಆವರಣದಲ್ಲಿರುವ ಐತಿಹಾಸಿಕ ಅನಂತೇಶ್ವರ ದೇವಾಲದಲ್ಲಿರುವ ಮಧ್ವಾಚಾರ್ಯರು ಅದೃಶ್ಯರಾದ ಸ್ಥಳದ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
ನಾಡಿನ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಿರುವ ಹಿರಿಯ ಪೇಜಾವರ ಶ್ರೀಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕಿದೆ. ಅವರು ಗಟ್ಟಿ ಮನಸ್ಸು ಮಾಡಿದರೆ ಈ ಬಿಕ್ಕಟ್ಟಿಗೆ ಪರಿಹಾರ ಖಂಡಿತ. ನಮ್ಮ ಎಲ್ಲಾ ನೋವುಗಳನ್ನು ಶ್ರೀಗಳ ಬಳಿ ಹೇಳಿದ್ದೇವೆ. ಈ ಸಮಸ್ಯೆಗೆ ಅವರಿಂದ ಮಾತ್ರ ಪರಿಹಾರ ಸಾಧ್ಯ. ಸೋದೆ ಶ್ರೀಗಳನ್ನು ಯಾರೋ ದಾರಿ ತಪ್ಪಿಸುತ್ತಿದ್ದಾರೆ ಎಂದು ಪುತ್ತಿಗೆ ಶ್ರೀಗಳು ಬೇಸರ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿ ಎಸ್ ಆಚಾರ್ಯ ಹೇಳಿಕೆ ನೀಡಿ, ಸೋದೆ ಶ್ರೀಗಳ ಪಾದಪೂಜೆಯ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ್ದೇನೆ. ಅಷ್ಠಮಠಗಳು ಒಂದಾಗಿ ಇದಕ್ಕೆ ಪರಿಹಾರ ಕಾಣಿಕೊಳ್ಳಬೇಕಿದೆ. ಸರಕಾರ ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಈಗ ಎಲ್ಲರೂ ಕಣ್ಣು ಪೇಜಾವರ ಶ್ರೀಗಳ ಮೇಲಿದ್ದು, ಶ್ರೀಗಳಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಸದ್ಯಕ್ಕೆ ವ್ಯಕ್ತವಾಗಿಲ್ಲ.