ಪುತ್ತಿಗೆ ಶ್ರೀಗಳ ವಿರುದ್ದ ತಿರುಗಿಬಿದ್ದ ಪೇಜಾವರ ಶ್ರೀಗಳು
ಪುತ್ತಿಗೆ ಶ್ರೀಗಳನ್ನು ಪರ್ಯಾಯಕ್ಕೆ ಆಹ್ವಾನಿಸದ ಬಗ್ಗೆ ನಾನು ತಟಸ್ಥ ನಿಲುವು ತಾಳಿಲ್ಲ. ವಿವಾದ ಬಗೆಹರಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಎಲ್ಲರೂ ನನ್ನ ವಿರುದ್ದ ಮಾತನಾಡುತ್ತಿರುವುದರಿಂದ ಮನಸಿಗೆ ಆಘಾತವಾಗಿದೆ. ನನ್ನ ಉಪವಾಸ ಯಾರ ವಿರುದ್ದವೂ ಅಲ್ಲ, ಯಾರ ಪರವಾಗಿಯೂ ಅಲ್ಲ. ನಾನು ಇಂದು ರಾತ್ರಿಯಿಂದ (ಜ 16) ಉಪವಾಸ ನಡೆಸಲು ನಿರ್ಧರಿಸಿದ್ದೇನೆ ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಪುತ್ತಿಗೆ ಶ್ರೀಗಳು ಸರ್ವಜ್ಞ ಪೀಠವೇರಿದ ಸಂದರ್ಭದಲ್ಲಿ ಶ್ರೀಕೃಷ್ಣನನ್ನು ಮುಟ್ಟಿ ಪೂಜಿಸಬಾರದೆಂದು ಷರತ್ತು ವಿಧಿಸಲಾಗಿತ್ತು. ಅವರು ಅದರಂತೆ ನಡೆದಿದ್ದರೂ ಕೂಡಾ, ಆ ಸಮಯದಲ್ಲಿ ಕೃಷ್ಣನನ್ನು ಮುಟ್ಟಿ ಪೂಜೆ ಮಾಡುವುದಿಲ್ಲ ಎಂದು ಅಷ್ಟಮಠಗಳಲ್ಲಿ ಕೆಲ ಮಠಗಳು ಲಿಖಿತ ರೂಪದಲ್ಲಿ ಕೊಡುವಂತೆ ವಿನಂತಿಸಿಕೊಂಡಿದ್ದರು. ಆದರೆ ಪುತ್ತಿಗೆ ಶ್ರೀಗಳು ಲಿಖಿತ ರೂಪದಲ್ಲಿ ಕೊಟ್ಟಿರಲಿಲ್ಲ. ಹೀಗಾಗಿ ಈ ಬಾರಿ ಪುತ್ತಿಗೆ ಶ್ರೀಗಳನ್ನು ಪರ್ಯಾಯ ಮಹೋತ್ಸವಕ್ಕೆ ಆಹ್ವಾನಿಸದ ಬಗ್ಗೆ ಅಷ್ಟ ಮಠಗಳಲ್ಲಿ ಏಕಾಭಿಪ್ರಾಯ ಮೂಡಿಸಲು ನನ್ನಿಂದ ಆಗುತ್ತಿಲ್ಲ ಎಂದು ಪೇಜಾವರ ಶ್ರೀಗಳು ಕೈಚೆಲ್ಲಿದ್ದಾರೆ.
ಸೋದೆ ಶ್ರೀಗಳ ಬಳಿ ನಾವು ಮಾತನಾಡಿದ್ದೇವೆ. ಪುತ್ತಿಗೆ ಶ್ರೀಗಳು ಉಪವಾಸ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ನಾನೂ ಕೂಡಾ ಸೋಮವಾರ ರಾತ್ರಿಯಿಂದ (ಜ 16) ಉಪವಾಸ ಕೈಗೊಳ್ಳುತ್ತೇನೆ ಎನ್ನುವ ಮೂಲಕ ಉಡುಪಿ ಪರ್ಯಾಯ ಆಮಂತ್ರಣಪತ್ರ ವಿವಾದ ಹೊಸ ತಿರುವು ಪಡೆದುಕೊಂಡಿದೆ.
ಇದೀಗ ಬಂದ ಸುದ್ದಿ: ಸೋದೆ ಮಠದ ಸಂಪೂರ್ಣ ಆಡಳಿತಾಧಿಕಾರದ ಚುಕ್ಕಾಣಿ ಶ್ರೀಗಳ ತಂದೆಯವರ ಕೈಯಲ್ಲಿದೆ. ಈಗ ಸೋದೆ ವಿಶ್ವವಲ್ಲಭ ಶ್ರೀಗಳ ತಂದೆಯವರ ಚಿಕ್ಕಮ್ಮ ದೈವಾಧೀನರಾದ ಹಿನ್ನಲೆಯಲ್ಲಿ ಶ್ರೀಗಳ ತಂದೆಯ ಕುಟುಂಬಕ್ಕೆ ಸೂತಕ ಇರುವುದರಿಂದ ಪರ್ಯಾಯ ಮಹೋತ್ಸವದ ಯಾವುದೇ ಚಟುವಟಿಕೆಗಳಲ್ಲಿ ಕುಟುಂಬ ಭಾಗವಹಿಸುವಂತಿಲ್ಲ. ಈ ಘಟನೆ ಸೋದೆಶ್ರೀಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. (ಸನ್ಯಾಸತ್ವ ಸ್ವೀಕರಿದ ನಂತರ ಯಾವುದೇ ಸಂಬಂಧಗಳು ಗಣನೆಗೆ ಬರುವುದಿಲ್ಲ, ಓದುಗರಿಗೆ ಬಿಡಿಸಿ ಹೇಳುವ ಸಲುವಾಗಿ ಈ ರೀತಿ ಬರೆಯಲಾಗಿದೆ)