ಜಯಲಲಿತಾ-ಆಡ್ವಾಣಿ-ಮೋದಿ ಮುಖಾಮುಖಿ ಇಂದು
2014ರಲ್ಲಿ ನಡೆಯಲಿರುವ ಮಹಾಚುನಾವಣೆ ಬಳಿಕ ಮುಂದಿನ ಸರಕಾರ ರಚನೆಯಲ್ಲಿ ತನ್ನ ಪಕ್ಷ ಪ್ರಮುಖ ಪಾತ್ರ ವಹಿಸಲಿದೆಯೆಂದು ಎಐಎಡಿಎಂಕೆ ಅಧಿನಾಯಕಿ ಈಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಳಿಕ ಬಿಜೆಪಿ ನಾಯಕರು ಮತ್ತು ಜಯಲಲಿತಾ ನಡುವೆ ನಡೆಯಬಹುದಾದ ಪ್ರಥಮ ಭೇಟಿ ಇದಾಗಿದೆ. ಶನಿವಾರ ಸಾಯಂಕಾಲ 4.30ಕ್ಕೆ ಈ ತ್ರಿವೇಣಿ ಸಂಗಮ ನಿಗದಿಯಾಗಿದೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.
ಜಯಲಲಿತಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಮೋದಿ ತೆರಳಿದ್ದರು. ಕಳೆದ ವರ್ಷ ಗುಜರಾತ್ನಲ್ಲಿ ಮೋದಿ ಕೈಗೊಂಡಿದ್ದ ಸದ್ಭಾವನಾ ಉಪವಾಸಕ್ಕೆ ಜಯಾ ತಮ್ಮ ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಿದ್ದರು.
ಜಯಲಲಿತಾ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಈ ಇಬ್ಬರು ನಾಯಕರು ಖ್ಯಾತ ರಾಜಕೀಯ ವಿಶ್ಲೇಷಕ ಚೋ. ರಾಮಸ್ವಾಮಿ ಸಂಪಾದಕತ್ವದ ತಮಿಳು ರಾಜಕೀಯ ಸಾಪ್ತಾಹಿಕ 'ತುಘಲಕ್'ನ 42ನೇ ವರ್ಷಾಚರಣೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಚೋ ಅವರು ಈ ಇಬ್ಬರು ನಾಯಕರೊಂದಿಗೆ ಹಾಗೂ ಜಯಲಲಿತಾ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ.