ಬಿಜೆಪಿ ಬಿಡೊಲ್ಲ: ಬಿಎಸ್ಆರ್ ಕಾಂಗ್ರೆಸ್ ಸೇರೊಲ್ಲ
ಈ ಮಧ್ಯೆ, ಸಂಕ್ರಾಂತಿ ಹಬ್ಬದ ದಿನ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಿಂದ 'ಬಿಎಸ್ಆರ್ ಕಾಂಗ್ರೆಸ್' ಪಾರ್ಟಿ ಹೆಸರಲ್ಲೇ ರಾಜಕೀಯ ಅಭಿಯಾನ ಆರಂಭಿಸುವುದಾಗಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ, ಜನಾರ್ದನ ರೆಡ್ಡಿಯ ಆಪ್ತ ಶ್ರೀರಾಮುಲು ಘೋಷಿಸಿದ್ದಾರೆ.
ಗಮನಾರ್ಹವೆಂದರೆ ನಿನ್ನೆ (ಬುಧವಾರ) ಸೋದರ ಜನಾರ್ದನ ರೆಡ್ಡಿಯ ಹುಟ್ಟುಹಬ್ಬವನ್ನು ಶ್ರೀರಾಮುಲು ಮತ್ತು ತಮ್ಮ ಕುಟುಂಬ ಆಡಂಬರದಿಂದ ಆಚರಿಸುತ್ತಿದ್ದರೆ ಕರುಣಾಕರ ಅವರು ಜಿಲ್ಲೆಯಲ್ಲಿ ಮತದಾರರ ಮಧ್ಯೆ ಕಾಲಕಳೆದರು.
ತಮ್ಮದೇ ಜಿಲ್ಲೆಯ, ತಮ್ಮ ಆಪ್ತಬಳಗದ ಬಿ. ಶ್ರೀರಾಮುಲು ಸಂಘಟಿಸಲಿರುವ ಹೊಸ ಪಕ್ಷಕ್ಕೆ ಸೇರ್ಪಡೆಯಾಗುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ, ಯಾವುದೇ ಜಿಲ್ಲೆಯವರು ಹೊಸ ಪಕ್ಷ ಕಟ್ಟಲಿ, ನಾನಂತೂ ಬಿಜೆಪಿಯಲ್ಲಿದ್ದೇನೆ. ಆ ಪಕ್ಷ ತೊರೆಯುವ, ಇಲ್ಲವೇ ಹೊಸ ಪಕ್ಷ ಸೇರ್ಪಡೆಯಾಗುವ ಆಲೋಚನೆಗಳಂತೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಬುಧವಾರ ತಾಲ್ಲೂಕಿನ ಚಿರಸ್ತಹಳ್ಳಿ, ದುಗ್ಗಾವತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾದ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಬಳಿಕ, ನೀಲಗುಂದ ಗ್ರಾಮದ ವೆಂಕಟೇಶ್ವರ ಕಾಲೊನಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.