ರಾಜ್ಯ ರೈತಸಂಘ ಇಬ್ಬಾಗ, ಕೋಡಿಹಳ್ಳಿ ಉಚ್ಚಾಟನೆ
ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಅಧ್ಯಕ್ಷ ಕೆ ಎಸ್ ಪುಟ್ಟಣ್ಣಯ್ಯ ನಡುವೆ ಅಧ್ಯಕ್ಷ ಗಾದಿಗಾಗಿ ಮುಸುಕಿನ ಗುದ್ದಾಟ ತೀವ್ರ ಸ್ವರೂಪ ಪಡೆದಿದ್ದು ಇದೇ ತಿಂಗಳು 29ರಂದು ನಡೆಯಲಿರುವ ಕೋರ್ ಕಮಿಟಿ ಸಭೆ ನಿರ್ಣಾಯಕವಾಗಿದ್ದು ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ರೈತಸಂಘದಿಂದಲೇ ಹೊರಹಾಕುವ ನಿರ್ಧಾರಕ್ಕೆ ಪುಟ್ಟಣ್ಣಯ್ಯ ನೇತೃತ್ವದ ತಂಡ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ರೈತ ಸಂಘದ ನೇತಾರ ಮತ್ತು ಹುಟ್ಟು ಹೋರಾಟಗಾರ ಪ್ರೊ. ನಂಜುಂಡಸ್ವಾಮಿ ಕಾಲವಾದ ನಂತರ ಪ್ರೊ. ನಂಜುಂಡಸ್ವಾಮಿ ಮತ್ತು ಪುಟ್ಟಣ್ಣಯ್ಯ ಬಣ ಒಂದಾಗಿ ರೈತಸಂಘದಡಿ ಹೋರಾಟ ನಡೆಸುವ ನಿರ್ಧಾರಕ್ಕೆ ಬಂದಿದ್ದವು. ಈಗ ರೈತಸಂಘಕ್ಕೆ ಕಾರ್ಯಾಧ್ಯಕ್ಷ ಮತ್ತು ಅಧ್ಯಕ್ಷ ನಾನೇ ಎಂದು ಹೇಳಿಕೊಂಡು ಅಶಿಸ್ತು ತೋರಿದ್ದಾರೆ ಎಂದು ಪುಟ್ಟಣ್ಣಯ್ಯ ಬಣ ಕೋಡಿಹಳ್ಳಿ ಅವರನ್ನು ರೈತಸಂಘದಿಂದಲೇ ಉಚ್ಚಾಟಿಸುವ ನಿರ್ಧಾರಕ್ಕೆ ಬಂದಿದೆ.
ರೈತ ಚಳುವಳಿ ಎಂಬುದು ಭೂಮಿ ಇದ್ದಹಾಗೆ. ಭೂಮಿಯಲ್ಲಿ ಬೆಳೆಯ ನಡುವೆ ಸ್ವಲ್ಪ ಕಳೆ ಇರುತ್ತದೆ. ರಾಜ್ಯ ಸಮಿತಿ ನಿರ್ಧಾರಕ್ಕೆ ವಿರುದ್ದವಾಗಿ ನಡೆಯುತ್ತಿರುವ ಕಳೆಯನ್ನು ಕಿತ್ತು ಹಾಕಬೇಕಿದೆ. ಈ ತಿಂಗಳ 29ರಂದು ಕೋರ್ ಕಮಿಟಿ ಸಮಿತ್ಯಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಅಧ್ಯಕ್ಷ ಪುಟ್ಟಣ್ಣಯ್ಯ ಹೇಳಿಕೆ ನೀಡಿದ್ದಾರೆ.