ಪೊಲೀಸರು ಪಾಕ್ ಧ್ವಜ ಪ್ರಕರಣ ಭೇದಿಸಿದ್ದು ಹೇಗೆ?
'ಸಿಂದಗಿ ಪಟ್ಟಣದ ರಾಕೇಶ್ ಸಿದ್ರಾಮಯ್ಯ ಮಠ (19), ಅನಿಲಕುಮಾರ ಶ್ರೀರಾಮ ಸೋಲಂಕರ, ಮಲ್ಲನಗೌಡ ವಿಜಕುಮಾರ ಪಾಟೀಲ (18), ಪರಶುರಾಮ ಅಶೋಕ ವಾಘ್ಮೋರೆ (20), ರೋಹಿತ್ ಈಶ್ವರ ನಾವಿ (18), ಸುನೀಲ್ ಮಡಿವಾಳಪ್ಪ ಅಗಸರ (18) ಎಂಬವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಅರುಣ ವಾಘ್ಮೋರೆ (20) ಪರಾರಿಯಾಗಿದ್ದಾನೆ' ಎಂದು ಜಿಲ್ಲಾ ಎಸ್ಪಿ ರಾಜಪ್ಪ ಹೇಳಿದರು.
'ರಾಕೇಶ್ ಮಠ ಶ್ರೀರಾಮ ಸೇನೆಯ ಸಿಂದಗಿ ಪಟ್ಟಣದ ವಿದ್ಯಾರ್ಥಿ ಘಟಕದ ಅಧ್ಯಕ್ಷನಾಗಿದ್ದು, ಉಳಿದವರೂ ಆ ಸಂಘಟನೆಯ ಪದಾಧಿಕಾರಿಗಳಾಗಿದ್ದಾರೆ. ಇವರೆಲ್ಲರೂ ವಿಜಾಪುರ ಮತ್ತು ಸಿಂದಗಿಯ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಒಂದು ವಾರದಿಂದ ಸಂಚು ರೂಪಿಸಿ ಈ ಕೃತ್ಯವೆಸಗಿದ್ದಾರೆ' ಎಂದರು.
ಡಿ.31ರ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ತಹಸೀಲ್ದಾರ ಕಚೇರಿ ಬಳಿ ನಸುಕಿನ ಜಾವ 3.30ರಿಂದ 4 ಗಂಟೆಯ ಅವಧಿಯಲ್ಲಿ ನಿಂತಿದ್ದ ದ್ವಿಚಕ್ರ ವಾಹನವೊಂದನ್ನು ಗಮನಿಸಿದ್ದರು. ಅದರ ಮಾಲೀಕನನ್ನು ಪತ್ತೆ ಮಾಡಿದರು. ಆತನನ್ನು ವಿಚಾರಿಸಿದಾಗ, 'ಅಂದು ರಾತ್ರಿ ತಹಸೀಲ್ದಾರ ಕಚೇರಿ ಆವರಣದ ಗಿಡಗಳ ಮಧ್ಯೆ ಇಬ್ಬರು ಯುವಕರು ನಿಂತಿದ್ದರು' ಎಂಬ ಸುಳಿವನ್ನು ಪೊಲೀಸರಿಗೆ ನೀಡಿದ.
'ಖಚಿತ ಮಾಹಿತಿಯ ಮೇರೆಗೆ ಅನಿಲ್ಕುಮಾರ ಶ್ರೀರಾಮ ಸೋಲಂಕರ ಎಂಬಾತನನ್ನು ಸಿಂದಗಿಯಲ್ಲಿ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ತಾವೆಲ್ಲ ಸೇರಿ ಸಿಂದಗಿ ಪಟ್ಟಣದ ಮಿನಿ ವಿಧಾನಸೌಧದ ಎದುರು ಇರುವ ಧ್ವಜ ಸ್ತಂಬಕ್ಕೆ ಪಾಕಿಸ್ತಾನದ ಧ್ವಜ ಹಾರಿಸಿದ್ದನ್ನು ಒಪ್ಪಿಕೊಂಡರು. ಹುಬ್ಬಳ್ಳಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ಉಳಿದ ಆರೋಪಿಗಳನ್ನು ಚಿಕ್ಕ ಸಿಂದಗಿ ಬಳಿ ಬಂಧಿಸಲಾಯಿತು' ಎಂದು ರಾಜಪ್ಪ ತಿಳಿಸಿದರು.
'ಸುನೀಲ್ ಅಗಸರ ಎಂಬಾತನ ಮನೆಯಲ್ಲಿ ಪಾಕಿಸ್ತಾನದ ಧ್ವಜವನ್ನು ತಯಾರಿಸಿದ್ದರು. ಅದನ್ನು ವ್ಯವಸ್ಥಿತವಾಗಿ ಜನವರಿ 1ರಂದು ಬೆಳಗಿನ ಜಾವ ಸಿಂದಗಿ ಮಿನಿ ವಿಧಾನಸೌಧದ ಆವರಣದಲ್ಲಿ ಹಾರಿಸಿದ್ದರು. ನಂತರ ಬೆಳಿಗ್ಗೆ 6ಕ್ಕೆ ಅವರೇ ಆ ಕಚೇರಿ ಆವರಣಕ್ಕೆ ಬಂದು ಜನರನ್ನು ಸೇರಿಸಿ ಗಲಾಟೆ ಪ್ರಾರಂಭಿಸಿ, ವಾಹನಗಳಿಗೆ ಕಲ್ಲು ತೂರಿದ್ದರು' ಎಂದು ಅವರು ವಿವರಿಸಿದರು.