ಉಡುಪಿ, ಅಷ್ಟಮಠಗಳ ನಡುವೆ ಭಿನ್ನಾಭಿಪ್ರಾಯ
ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಮಹೋತ್ಸವದಲ್ಲಿ ಇದೇ ಜನವರಿ 18ರಂದು ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಉಡುಪಿ ಪರ್ಯಾಯ ಸರ್ವಜ್ಞ ಪೀಠವನ್ನೇರಲಿದ್ದಾರೆ. ಆದರೆ ಪರ್ಯಾಯ ರಾಯಸದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಹೆಸರು ಇಲ್ಲದಿರುವುದು ಶ್ರೀಗಳ ಭಕ್ತವೃಂದಕ್ಕೆ ಅಸಮಾಧಾನಕ್ಕೆ ಕಾರಣವಾಗಿದೆ.
ಈ ವಿಷಯದಲ್ಲಿ ಶ್ರೀಕೃಷ್ಣ ಭಕ್ತವೃಂದ ಮತ್ತು ಹಿಂದೂ ಸಮಾಜ ನಾಗರಿಕ ಸಮಿತಿ ಸಭೆ ನಡೆಸಿ ಪರ್ಯಾಯ ಸ್ವಾಗತ ಸಮಿತಿಯ ನಿರ್ಧಾರಕ್ಕೆ ಅಚ್ಚರಿ ವ್ಯಕ್ತ ಪಡಿಸಿದೆ. ಈ ನಿಟ್ಟಿನಲ್ಲಿ ಅಷ್ಟ ಮಠಾಧೀಶರನ್ನು ಮತ್ತು ಮುಖ್ಯವಾಗಿ ಸೋದೆ ಮಠದ ಶ್ರೀಗಳೊಂದಿಗೆ ಸಮಾಲೋಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದೆ.
ಈ ಹಿಂದೆ ಅಷ್ಟ ಮಠಗಳಲ್ಲಿ ನಾಲ್ಕು ಮಠಗಳು ಒಂದು ಕಡೆ ಇದ್ದರೆ ಇನ್ನು ನಾಲ್ಕು ಮಠಗಳು ಪ್ರತ್ಯೇಕವಾಗಿ ತಮ್ಮನ್ನು ಗುರುತಿಸಿಕೊಂಡಿದ್ದವು. ಪೇಜಾವರ, ಫಲಿಮಾರು, ಪುತ್ತಿಗೆ ಮತ್ತು ಅದಮಾರು ಮಠಗಳು ಒಂದು ಕಡೆಯಾದರೆ ಶಿರೂರು, ಕೃಷ್ಣಾಪುರ, ಸೋದೆ ಮತ್ತು ಕಾಣಿಯೂರು ಮಠಗಳು ಇನ್ನೊಂದು ಕಡೆ. ತದನಂತರ ಎಲ್ಲಾ ಮಠಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮೆರೆತು ಒಂದಾಗಿದ್ದರು.
ಈ ನಡುವೆ ಸೋಮವಾರ (ಜ 2) ಪರ್ಯಾಯ ಪೀಠವನ್ನೇರಲಿರುವ ಸೋದೆ ಶ್ರೀಗಳ ಪುರಪ್ರವೇಶ ಕಾರ್ಯಕ್ರಮ ವಿಜ್ರುಂಭಣೆಯಿಂದ ನಡೆದಿದೆ. ಉಡುಪಿ ಜೋಡುಕಟ್ಟೆ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ನೂರಾರು ವಾಹನಗಳಲ್ಲಿ ಬಂದ ಭಕ್ತಾದಿಗಳು ಹೊರೆ ಕಾಣಿಕೆಯನ್ನು ಸಮರ್ಪಿಸಿದ್ದಾರೆ.