ಬಂಗಾರದಂತಹ ಕುಟುಂಬ ಒಡೆದ ಖಳನಾಯಕ ಫಾಲಾಕ್ಷಿ: ಮಧು
ಮನೆಯ ಹಿರಿಯ ಪುತ್ರನಾಗಿ ವಸಂತ ಕುಮಾರ ಮನೆಯಿಂದ ಆಚೆ ನಡೆದು ಹತ್ತಾರು ವರ್ಷಗಳೇ ಆಗಿವೆ. ಇದಕ್ಕೆಲ್ಲ ಕುಮ್ಮಕ್ಕು ನೀಡಿರುವುದು ನಮ್ಮಪ್ಪ (ಬಂಗಾರಪ್ಪ) ಅವರ ಅಕ್ಕನ ಮಗ ಫಾಲಾಕ್ಷಿ. ಅವನೇ ನಮ್ಮ ಕುಟುಂಬದ ಖಳನಾಯಕ. ಆದರೆ ನಮ್ಮಪ್ಪ ಅವರ ಅಕ್ಕನ ಕುಟುಂಬಕ್ಕಾಗಿ ಬಹಳಷ್ಟು ಉಪಕಾರ ಮಾಡಿದ್ದಾರೆ. ಊರಿನಲ್ಲಿ 8 ಬೆಡ್ ರೂಂಗಳ ಮನೆ ಕಟ್ಟಿಕೊಟ್ಟಿದ್ದಾರೆ. ಆದರೆ ಫಾಲಾಕ್ಷಿ ನಮ್ಮ ಕುಟುಂಬದ ಸಾಮರಸ್ಯಕ್ಕೆ ಕೊಳ್ಳಿಯಿಟ್ಟ ಮೇಲೆ ನಮ್ಮಪ್ಪ ಆ ಮನೆಯನ್ನು ಬಿಟ್ಟು ನನ್ನ ತೋಟದ ಮನೆಗೆ ಬಂದುಬಿಟ್ಟರು.
ಆ ಮನೆಯಲ್ಲಿ ಕೆಲವು ವರ್ಷಗಳ ಹಿಂದೆ ಫಾಲಾಕ್ಷಿ ನನ್ನ ಅಪ್ಪನಿಗೆ ಮದ್ದೀಡು ಮಾಡಿದ. (ಅಂದರೆ ತಮಗೆ ಆಗದವರನ್ನು ಮನೆಗೆ ಊಟಕ್ಕೆ ಕರೆದು, ಅವರಿಗೆ ಕೆಡುಕು ಬಯಸಿ, ಊಟದಲ್ಲಿ ಕಪ್ಪು ಬಣ್ಣದ ಔಷಧ ಬೆರೆಸುವ ಪದ್ಧತಿ. ಹಳ್ಳಿಗಳ ಕಡೆ ಈಗಲೂ ಇಂತಹ ಅಮಾನವೀಯ ಪದ್ಧತಿ ಇದೆ). ಇದರಿಂದ ಮಾಮಾ ಅವರ ಆರೋಗ್ಯ ತುಂಬಾ ಏರುಪೇರಾಯಿತು.
ಆದರೆ ಮದ್ದೀಡು ಮಾಡಿದ ವ್ಯಕ್ತಿಗಳಿಗೆ ಇದು ಮದ್ದೀಡು ಪ್ರಭಾವ ಎಂಬುದು ಗೊತ್ತಿರುತ್ತದೆ. ಹೀಗಾಗಿ ಅವರು ಮಾಮಾನನ್ನು ಆಸ್ಪತ್ರೆಗೆ ಸೇರಿಸುವ ವ್ಯವಧಾನ ತೋರಲೇ ಇಲ್ಲ. ಏನೂ ಆಗೇ ಇಲ್ಲ ಎಂಬಂತೆ ನನಗೆ ಫೋನ್ ಮಾಡಿ ತಿಳಿಸಿದ. ದಾವಣಗೆರೆಯಲ್ಲಿದ್ದ ನಾನು ತಕ್ಷಣ ಆ ಮನೆಗೆ ಧಾವಿಸಿದೆ. ಅಪ್ಪನ ಸ್ಥಿತಿ ಕಂಡು ಕಂಗಾಲಾದೆ. ತಡಮಾಡದೆ ಆಸ್ಪತ್ರೆಗೆ ಸೇರಿಸಿ, ಅಪ್ಪನ್ನನ್ನು ಉಳಿಸಿಕೊಂಡೆ.
ಮಾಮಾ ತಮ್ಮ ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದರು. ಕಿಂಚಿತ್ತು ಹೆಚ್ಚುಕಮ್ಮಿಯಾದರೂ ವೈದ್ಯರಿಗೆ ತೋರಿಸುತ್ತಿದ್ದರು. ತನ್ನ ಅಕ್ಕನ ಮನೆಯಲ್ಲಿ ಹೀಗೆ food poisioning ಆದ ಮೇಲೆ ಅಪ್ಪ ಮತ್ತೆ ಆ ಮನೆಗೆ ಹೋಗಲು ಸುತರಾಂ ಇಷ್ಟಪಡಲಿಲ್ಲ. ಈ ಘಟನೆಯ ನಂತರ ಫಾಲಾಕ್ಷಿ ಮನೆಯನ್ನು ಶಾಶ್ವತವಾಗಿ ತೊರೆಯಲು ಅಪ್ಪ ನಿರ್ಧರಿಸಿದರು. ಇದೆಲ್ಲ ಕುಮಾರನಿಗೆ ಗೊತ್ತಿದ್ದರೂ ಏನೂ ಆಗೇ ಇಲ್ಲ ಎಂದು ಗುಮ್ಮನ ಬಸವನಾಗಿದ್ದ ಎಂದು ತಮ್ಮ ಕಸಿನ್ ಫಾಲಾಕ್ಷಿಯ ಕಥಾನಕವನ್ನು ಮಧು ತೆರೆದಿಟ್ಟರು.
ಈಗಲೂ ಅಷ್ಟೇ, ಅಪ್ಪನ ಶ್ರಾದ್ಧಕ್ಕೆಂದು ಬಂದವ, ಅಪ್ಪನಿಗೆ ಇಷ್ಟವಿಲ್ಲದಿದ್ದರೂ ಆ ಮನೆಯಲ್ಲೇ ಉಳಿದುಕೊಂಡು ಅಮ್ಮನನ್ನು ನೋಯಿಸುತ್ತಿದ್ದಾನೆ ಎಂದು ಮಧು ಕುಟುಂಬದ ನೋವನ್ನು ತೋಡಿಕೊಂಡರು.