ಅಣ್ಣಾ ಉಪವಾಸಕ್ಕೆ ಮುಂಬೈ ಮಹಾನಗರಿ ಸಕಲಸಜ್ಜು
ಅಣ್ಣಾ ಹಜಾರೆ ಅವರು ಸೋಮವಾರವೇ ತಮ್ಮ ಸ್ವಗ್ರಾಮ ರಾಳೇಗಣ ಸಿದ್ಧಿಯಿಂದ ಹೊರಟಿದ್ದು, ಮುಂಬೈ ತಲುಪಿಕೊಂಡಿದ್ದಾರೆ. ಬಾಂದ್ರಾ ಮತ್ತು ಕುರ್ಲಾ ಉಪನಗರಗಳ ನಡುವೆ ಇರುವ ಎಂಎಂಆರ್ ಡಿಎ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಉಪವಾಸಕ್ಕೆ ಕುಳಿತುಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಜುಹು ಬೀಚಿನಲ್ಲಿರುವಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.
ಪ್ರಬಲ ಲೋಕಪಾಲ ಮಸೂದೆಗೆ ಒತ್ತಾಯಿಸಿ ಮೂರು ದಿನಗಳ ಸತ್ಯಾಗ್ರಹಕ್ಕೆ ಅಣ್ಣಾ ತಂಡ ಸಿದ್ಧವಾಗುತ್ತಿದ್ದರೆ, ಇನ್ನೊಂದೆಡೆ ಈ ಸತ್ಯಾಗ್ರಹ ಮತ್ತು ರ್ಯಾಲಿಯನ್ನು ಸಂವಿಧಾನಬಾಹಿರ ಎಂದು ಘೋಷಿಸಬೇಕು ಎಂದು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಿಚರಣೆಗೆ ಸ್ವೀಕರಿಸಿದೆ.
ಏತನ್ಮಧ್ಯೆ ಅಣ್ಣಾ ಜ್ವರ, ಶೀತ ಹಾಗೂ ಕಫದ ಸಮಸ್ಯೆಯಿಂದ ಬಳಲುತ್ತಿದಾರೆ. ಆದರೂ ಅವರು ತಮ್ಮ ನಿಗದಿತ ಕಾರ್ಯಕ್ರಮದ ಅನುಸಾರ ಸತ್ಯಾಗ್ರಹವನ್ನು ನಡೆಸಿಯೇ ತೀರುವುದಾಗಿ ಸ್ಪಷ್ಟಪಡಿಸಿದ್ದಾರೆ. ಮೈದಾನದಲ್ಲಿ ಕೇವಲ 20 ಸಾವಿರ ಚದರ ಅಡಿ ಮಾತ್ರವೇ ಅಣ್ಣಾ ತಂಡಕ್ಕೆ ಬಾಡಿಗೆ ನೀಡಲಾಗಿದೆ.
10 ಸಾವಿರ ಚದುರ ಅಡಿಗಳನ್ನು ವಾಹನ ನಿಲುಗಡೆಗೆ ಮೀಸಲಿರಿಸಲಾಗಿದೆ. ಇದಕ್ಕಾಗಿ 7.78 ಲಕ್ಷ ರೂಪಾಯಿ ಬಾಡಿಗೆ ವಸೂಲು ಮಾಡಲಾಗಿದೆ. ಅಂತೆಯೇ ಭದ್ರತೆಗಾಗಿ ರೂ 5.29 ಲಕ್ಷ ಕಟ್ಟಿಸಿಕೊಳ್ಳಲಾಗಿದೆ.