ದೇಶಭಕ್ತಿ ಬಡಿದೆಬ್ಬಿಸಿದ ಸೂಲಿಬೆಲೆ 'ಜಾಗೋ ಭಾರತ್'
ಬಹಳ ದಿನಗಳಿಂದ ಚಕ್ರವರ್ತಿಯವರ 'ಜಾಗೋ ಭಾರತ್' ಕಾರ್ಯಕ್ರಮವನ್ನು ವೀಕ್ಷಿಸಲೇಬೇಕು ಎಂದು ಕಾಯುತ್ತಿದ್ದೆ. ಕೊನೆಗೂ ಮೊನ್ನೆ ಆ ಅವಕಾಶ ಸಿಕ್ಕಿತು. ಸ್ಥಳ ಹುಡುಕಿಕೊಂಡು ಹೋಗಿ ಕಾರ್ಯಕ್ರಮದಲ್ಲಿ ಕೂತವನೇ ಕೊನೆಯಲ್ಲಿ ವಂದೇಮಾತರಂ ಮುಗಿಯುವವರೆಗೂ ಪ್ರಯತ್ನಪಟ್ಟರೂ ಮೇಲೆ ಏಳಲು ಸಾಧ್ಯವಾಗಲೇ ಇಲ್ಲ. ಆ ನಡುಗುವ ಚಳಿಯಲ್ಲೂ ಕೂತಿದ್ದ ಹೆಂಗಸರು ಮಕ್ಕಳನ್ನು ನೋಡಿ ನನಗೆ ನಾನೇ ಹಾಸ್ಯ ಮಾಡಿಕೊಂಡು ಕಾರ್ಯಕ್ರಮ ಮುಗಿಸಿಕೊಂಡೇ ತೆರಳಿದ್ದು.
ಕಾರ್ಯಕ್ರಮದ ವಾತಾವರಣ ಹೇಗಿತ್ತು ಅಂದ್ರೆ ಸಿಖ್ಖ್ ಪಂಥ ಪ್ರಾರಂಭವಾದ ಆ ದಿನವನ್ನು ನೆನಪಿಸುವಂತಿತ್ತು. ಆ ಸಂದರ್ಭದಲ್ಲಿ ಸೂಲಿಬೆಲೆಯವರೆನಾದರೂ 'ದೇಶಕ್ಕಾಗಿ ಯಾರು ಪ್ರಾಣ ಕೊಡಲು ತಯಾರಿದೀರ?' ಅಂತ ಏನಾದರು ಕೇಳಿದ್ದರೆ ಬಹುತೇಕ ಎಲ್ಲರು 'ನಾ ರೆಡಿ ' ಎಂದು ಏಳುತ್ತಿದ್ದರು. ಆ ತರಹದಲ್ಲಿ ಸ್ವದೇಶದ ಬಗೆಗಿನ ಅಭಿಮಾನವನ್ನ ತಟ್ಟಿ ಎಬ್ಬಿಸಿದಂತಿತ್ತು. ಹೆಸರಿಗೆ ತಕ್ಕಂತೆ 'ಭಾರತವನ್ನ ಜಾಗೃತ'ಗೊಳಿಸುವಂತಿತ್ತು.
ಚಕ್ರವರ್ತಿ ಹೇಳಿದ ಒಂದು ಘಟನೆ : ಮದುವೆ ನಿಶ್ಚಯವಾದ ಒಬ್ಬಳು ಹುಡುಗಿ ಚಕ್ರವರ್ತಿಯವರನ್ನು ತನ್ನ ಮದುವೆಯ ಸಂದರ್ಭದ ಆರತಕ್ಷತೆಗೆ 'ಜಾಗೋ ಭಾರತ್' ಕಾರ್ಯಕ್ರಮವನ್ನು ನಡೆಸಿಕೊಡಲು ಕೇಳಿಕೊಳ್ಳುತ್ತಾಳೆ. ಎಷ್ಟು ಬೇಡವೆಂದರೂ ಕೇಳದೆ ಹಠ ಹಿಡಿಯುತ್ತಾಳೆ. ಕಾರ್ಯಕ್ರಮ ಮುಗಿದ ನಂತರ ಚಕ್ರವರ್ತಿಯವರ ಹತ್ತಿರ ಬಂದು ತನ್ನ ಮಕ್ಕಳನ್ನು ದೇಶದ ಕೆಲಸಕ್ಕಾಗಿ ಕಳಿಸಿಕೊಡ್ತೇನೆ ಅಂತ ಹೇಳುವಷ್ಟರ ಮಟ್ಟಿಗೆ ಪ್ರೇರಣೆ ಪಡೆದಿರುತ್ತಾಳೆ.
ಕಾರ್ಯಕ್ರಮದ ಕೊನೆಯಲ್ಲಿ ಸೂಲಿಬೆಲೆಯವರು ಎಲ್ಲರಿಗು ಪ್ರಾರ್ಥನೆ ಮಾಡಿದ್ದು ಏನು ಗೊತ್ತ? 'ದಯವಿಟ್ಟು ಇನ್ನಾದರು ನಮ್ಮ ಭಾರತವನ್ನ ಬೈಯುವುದನ್ನ ನಿಲ್ಲಿಸಿ' ಅಂತ. ನಮ್ಮ ದೇಶದ ಹಿರಿಮೆಗಳೇನು ಎಂದು ತಿಳಿದುಕೊಳ್ಳಲು, ಭಾರತವನ್ನು ಪ್ರೀತಿಸಲು, 'ಭಾರತೀಯ'ನಾಗಲು ಹೆಮ್ಮೆಪಡಲು ಏನಿದೆ ಏನು ತಿಳಿದುಕೊಳ್ಳಲು ಯಾರಾದರು 'ಕಷ್ಟ' ಪಡುತ್ತಿದ್ದರೆ ದಯವಿಟ್ಟು ತಪ್ಪಿಸಿಕೊಳ್ಳಬೇಡಿ, 'ಜಾಗೋ ಭಾರತ್'.