ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ವಿಧಿವಶ
ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದರು. ಅವರು ಅಂತ್ಯದಿಂದಾಗಿ ಕರ್ನಾಟಕ ರಾಜಕೀಯ ಮುತ್ಸದ್ದಿ, ಸ್ಟೈಲಿಶ್ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ.
ಕೆಲ ದಿನಗಳ ಹಿಂದೆ "ನಾನು ಮತ್ತು ದೇವೇಗೌಡರು ರಾಜಕೀಯದಿಂದ ಯಾವತ್ತೂ ನಿವೃತ್ತರಾಗುವುದಿಲ್ಲ" ಎಂದು ಬಂಗಾರಪ್ಪ ಸರಿಯಾಗಿ ಒಂದು ವರ್ಷದ ಹಿಂದೆ ಜಾತ್ಯತೀತ ಜನತಾದಳ ಪಕ್ಷ ಸೇರಿದ ಸಂದರ್ಭದಲ್ಲಿ ಹೇಳಿದ್ದರು. ಕೊನೆಯವರೆಗೂ ಅವರು ರಾಜಕೀಯದಲ್ಲಿ ಸಕ್ರಿಯರಾಗಿಯೇ ಉಳಿದಿದ್ದರು.
ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ರಾಘವೇಂದ್ರ ಅವರಿಗೆ ಸೋತಿದ್ದರು. ಅದಕ್ಕೂ ಮುಂಚೆ ಬಿಜೆಪಿಯ ಆಯನೂರು ಮಂಜುನಾಥ್ ಅವರಿಗೆ ಸೋತಿದ್ದರು.
ಶಾಲಾ ಕಾಲೇಜು ರಜಾ : ಬಂಗಾರಪ್ಪನವರ ಗೌರವಾರ್ಥವಾಗಿ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ರಾಜ್ಯಾದ್ಯಂತ ಇಂದು ಶಾಲಾ, ಕಾಲೇಜುಗಳಿಗೆ ರಜಾ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ನಾಳೆಯೂ ಶಾಲಾಕಾಲೇಜುಗಳು ಬಂದ್ ಆಗಿರುತ್ತವೆ. ಅವರ ಅಂತ್ಯಸಂಸ್ಕಾರ ಶಿವಮೊಗ್ಗದಲ್ಲಿ ಮಂಗಳವಾರ ಸಂಜೆ ನೆರವೇರಿಸಲಾಗುವುದು.
ಗಣ್ಯರ ಕಂಬನಿ : ಬಂಗಾರಪ್ಪ ಅವರ ಕಳೆಬರವನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ಗೃಹದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗಿದೆ. ಮುಖ್ಯಮಂತ್ರಿ ಸದಾನಂದ ಗೌಡ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ವಿದೇಶಾಂಗ ಸಚಿವ ಎಸ್ಎಂ ಕೃಷ್ಣ, ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ, ಕುಮಾರಸ್ವಾಮಿ ಮುಂತಾದ ರಾಜಕೀಯ ಧುರೀಣರು ಆಗಮಿಸಿ ಅಂತಿಮ ದರ್ಶನ ಪಡೆದರು. ಚಿತ್ರರಂಗಕ್ಕೆ ಕೂಡ ಅವರ ಕುಟುಂಬ ಹತ್ತಿರವಾದ್ದರಿಂದ ಚಿತ್ರರಂಗದ ಅನೇಕ ಗಣ್ಯರು ಕೂಡ ಆಗಮಿಸಿ ಬಂಗಾರಪ್ಪ ಅವರ ಅಗಲಿಕೆಗೆ ಕಂಬನಿ ಮಿಡಿದರು.
ಅಂತಿಮ ಸಂಸ್ಕಾರ : ಬೆಂಗಳೂರಿನಿಂದ ಬಂಗಾರಪ್ಪನವರ ಪಾರ್ಥೀವ ಶರೀರ ಶಿವಮೊಗ್ಗಕ್ಕೆ ಹೊರಟಿದ್ದು, ಡಿ.27ರ ಮಂಗಳವಾರ ಸಂಜೆ ಅವರ ತವರೂರು ಸೊರಬದಲ್ಲಿರುವ ಜ್ಯೂನಿಯರ್ ಕಾಲೇಜಿನ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ಸಕಲ ಸರಕಾರಿ ಮರ್ಯಾದೆಯೊಂದಿದೆ ಸೊರಬದಲ್ಲಿ ಅಂತಿಮ ಸಂಸ್ಕಾರ ಮಾಡಲಾಗುವುದು.