ಯಾದಗಿರಿ ತಾಲೂಕಿನಲ್ಲಿ ಅಭಿನವ ಶ್ರವಣಕುಮಾರ
ಶ್ರವಣಕುಮಾರನ ಕಥೆ ನೀವು ಕೇಳಿರಬಹುದು. ಹೆತ್ತವರ ಆಸೆ ತೀರಿಸಲೆಂದು ತಕ್ಕಡಿಯಲ್ಲಿ ಕೂಡಿಸಿಕೊಂಡು ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿದ ಶ್ರವಣಕುಮಾರನ ಕಥೆ ಅಜರಾಮರ. ಅದು ರಾಮಾಯಣ ಕಾಲ. ಈಗ ಪ್ರತಿದಿನ ಮನೆಯಲ್ಲಿಯೇ ರಾಮಾಯಣ ನಡೆಯುವ ಇಂದಿನ ಯುಗದಲ್ಲಿ ಶ್ರವಣಕುಮಾರರಂಥವರನ್ನು ಹುಡುಕುವುದು ಅಸಾಧ್ಯ. ಈ ಅಸಾಧ್ಯವನ್ನು ಸಾಧ್ಯವಾಗಿಸಿದ ಅಭಿನವ ಶ್ರವಣಕುಮಾರ ಕರ್ನಾಟಕದ ಯಾದಗಿರಿಯಲ್ಲಿ ಇದ್ದಾನೆಂದರೆ ನೀವು ನಂಬಲೇಬೇಕು.
ಯಾದಗಿರಿ ತಾಲೂಕಿನ ಮಗ್ಧಪೂರ್ ಗ್ರಾಮದಲ್ಲಿ ಈ ಆಧುನಿಕ ಶ್ರವಣಕುಮಾರನಿದ್ದಾನೆ. ಪ್ರತಿ ವರ್ಷ ಕೊನೆಯ ತಿಂಗಳಲ್ಲಿ ಜನ್ಮ ನೀಡಿದವರನ್ನು ತೊಟ್ಟಿಲಿನಲ್ಲಿ ಕುಡಿಸಿ ಪೂಜೆ ಮಾಡುತ್ತಾನೆ. ಕಲ್ಲು ದೇವರನ್ನು ನಂಬದ ವೀರಭದ್ರಪ್ಪ ತಂದೆ ಹುಸೇನಪ್ಪಾ (72), ತಾಯಿ ಅನಂತಮ್ಮ (65) ಅವರನ್ನು ಸಾಕ್ಷಾತ್ ದೇವರು ಎಂದು ನಂಬಿದ್ದಾನೆ ಮತ್ತು ಪೂಜಿಸುತ್ತಾನೆ.
ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದರೂ ಇವರ ತಂದೆ ತಾಯಿ ಕಷ್ಟಪಟ್ಟು ದುಡಿದು ಮಗ ವೀರಭದ್ರಪ್ಪನನ್ನು ಬಿಎಸ್ಸಿ ವರೆಗೂ ಓದಿಸಿದ್ದಾರೆ. ಅವರ ಆರ್ಶಿವಾದದಿಂದ ಇವತ್ತು ಎಸಿಸಿ ಸಿಮೆಂಟ್ ಫ್ಯಾಕ್ಟರಿಯಲ್ಲಿ ವೀರಭದ್ರಪ್ಪ ಕೆಲಸಮಾಡುತ್ತಿದ್ದಾನೆ. ಇಂದಿನ ಕಾಲದಲ್ಲಿ ಹೆತ್ತ ತಂದೆತಾಯಿರನ್ನು ಮನೆಯಿಂದ ಹೊರಗಡೆ ಹಾಕುವುದು. ಕೀಳಾಗಿ ನೋಡುವ ಮಕ್ಕಳನ್ನು ದಿನನಿತ್ಯ ನಾವು ನೋಡುತ್ತೇವೆ. ಅಂಥದರದಲ್ಲಿ ವೀರಭದ್ರಪ್ಪಾ 13 ವರ್ಷಗಳಿಂದ ತನ್ನ ತಂದೆ ತಾಯಿಯನ್ನು ಪೂಜಿಸುತ್ತಾ ಬಂದಿದ್ದಾನೆ.
ಈ ಪೂಜೆಯನ್ನು ನೋಡಲು ಸ್ಥಳಿಯ ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಿಂದ ಜನರು ಸಹ ಬರುತ್ತಾರೆ. ಬಂದವರಿಗೆಲ್ಲಾ ಊಟವನ್ನು ಹಾಕಿ ಸಂತೋಷ ಪಡುತ್ತಾನೆ. ಹೆತ್ತ ತಂದೆ ತಾಯಿಯನ್ನು ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ಉತ್ಕಟ ಮನೊಭಾವ ಇತನದ್ದು. ಹೆತ್ತವರನ್ನು ಸಂಧ್ಯಾಕಾಲದಲ್ಲಾದರೂ ನೋಡಿಕೊಳ್ಳಲು ಹಿಂದೆ ಮುಂದೆ ನೋಡಿ, ಅನಾಥಾಶ್ರಮಕ್ಕೋ, ವೃದ್ಧಾಶ್ರಮಕ್ಕೋ ಸೇರಿರುವ ನಿರ್ದಯಿ ಮಕ್ಕಳಿಗೆ ವೀರಭದ್ರಪ್ಪ ಸ್ಫೂರ್ತಿ ನೀಡಲಿ.