ಅಣ್ಣಾ ಜೈಲ್ ಭರೋ ಕರೆಗೆ ಕುಣಿಯುತ್ತಿದೆ ಕರ್ನಾಟಕ
ಈ ಜೈಲ್ ಭರೋ (ಜೈಲು ಸೇರು) ಆಂದೋಲನದಲ್ಲಿ ಧುಮುಕಲು ಅಣ್ಣಾ ಹಜಾರೆ ಭಾರತದ ಜನತೆಗೆ ಆನ್ಲೈನ್ ಮುಖಾಂತರ ಕರೆ ನೀಡಿದ್ದಾರೆ. ಇದಕ್ಕಾಗಿ www.jailchalo.com ವೆಬ್ಸೈಟ್ ರೂಪಿಸಲಾಗಿದ್ದು, ಸಾವಿರಾರು ಜನರು ನೊಂದಾಯಿಸಿಕೊಳ್ಳುತ್ತಿದ್ದಾರೆ. ಆನ್ಲೈನ್ ಅಲ್ಲದೆ ಎಸ್ಎಮ್ಎಸ್ ಮತ್ತು ಮಿಸ್ಡ್ ಕಾಲ್ ಮುಖಾಂತರವೂ ಆಂದೋಲನದಲ್ಲಿ ಧುಮುಕಬಹುದಾಗಿದೆ.
ಅಣ್ಣಾ ಅವರು ನೀಡಿರುವ ಈ ಕರೆಗೆ ಕರ್ನಾಟಕದಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೊಂದಾಯಿಸಿಕೊಳ್ಳುವವರಲ್ಲಿ ದೆಹಲಿ, ಮಹಾರಾಷ್ಟ್ರ ಮುಂಚೂಣಿಯಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ಕರ್ನಾಟಕ ಇದೆ. ಅತಿ ಹೆಚ್ಚು ನೊಂದಾವಣೆಗಳು ಬೆಂಗಳೂರು, ಮಂಗಳೂರು, ಮೈಸೂರು, ಗುಲಬರ್ಗಾದಿಂದ ಆಗುತ್ತಿವೆ. ನೊಂದಾಯಿಸಿಕೊಂಡವರ ಸಂಖ್ಯೆ ಈಗಾಗಲೆ ಸಾವಿರ ದಾಟಿದೆ.
ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಕಾರಾಗ್ರಹ ಈಗಾಗಲೆ ಗಣ್ಯಾತಿಗಣ್ಯರಿಂದ ತುಂಬಿತುಳುಕುತ್ತಿರುವುದರಿಂದ, ಅಣ್ಣಾ ಕರೆಗೆ ಓಗೊಟ್ಟು ಜೈಲು ಸೇರುವ ಯುವ ಜನತೆಯನ್ನು ತುಂಬಲು ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆ ಬೇರೆ ವ್ಯವಸ್ಥೆಗಳನ್ನು ಮಾಡಬೇಕಿದೆ.