ಕರವೇ ಗೌಡರು ಪುಸ್ತಕ ಬರೆದಿದ್ದಾರೆ, ಬರ್ತೀರಲ್ಲ?
ಹುಕ್ಕೇರಿ ಹಿರೇಮಠ ಗುರುಶಾಂತೇಶ್ವರ ಸಂಸ್ಥಾನದ ಶ್ರೀಶ್ರೀಶ್ರೀ ಷಟಸ್ಥಳಪರಬ್ರಹ್ಮಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಪುಸ್ತಕ ಬಿಡುಗಡೆಗೊಳ್ಳುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಗೃಹ ಸಚಿವ ಆರ್ ಅಶೋಕ್ ಮತ್ತು ಅಧ್ಯಕ್ಷತೆಯನ್ನು ಟಿ.ಎ. ನಾರಾಯಣ ಗೌಡರು ವಹಿಸುತ್ತಿದ್ದಾರೆ.
ಡಿ.26ರ ಬೆಳಿಗ್ಗೆ 10.30ಕ್ಕೆ ಟೌನ್ ಹಾಲ್ ಬಳಿಯಿರುವ, ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಕರವೇ ನಲ್ನುಡಿ ಮಾಸಪತ್ರಿಕೆ ಆಯೋಜಿಸಿದ್ದ ಕರವೇ ನಲ್ನುಡಿ ಕಥಾಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತಿದೆ.
ಪ್ರಶಸ್ತಿ ಪ್ರದಾನವನ್ನು 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ. ಸಿ.ಪಿ. ಕೃಷ್ಣಕುಮಾರ್ ಅವರು ಮಾಡಲಿದ್ದಾರೆ. ಕರವೇ ನಲ್ನುಡಿ ಕುರಿತು ಬೀದರ್ ಬಸವ ಸೇವಾ ಪ್ರತಿಷ್ಠಾನದ ವಚನ ಅಧ್ಯಯನ ಕೇಂದ್ರದ ನಿರ್ದೇಶಕರಾಗಿರುವ ರಂಜಾನ್ ದರ್ಗಾ ಅವರು ನಾಲ್ಕು ನುಡಿಗಳನ್ನು ಆಡಲಿದ್ದಾರೆ.
ಬಹುಮಾನ ಗೆದ್ದವರು : ಮೊದಲನೇ ಬಹುಮಾನವನ್ನು ಮಂಜುನಾಥ್ ಲತಾ (ಮೊತ್ತ 25 ಸಾವಿರ), ಎರಡನೇ ಬಹುಮಾನ ಗೌತಮ ಜ್ಯೋತ್ಸ್ನಾ ಜಿ.ಜೆ. (15 ಸಾವಿರ) ಮತ್ತು ಮೂರನೇ ಬಹುಮಾನ ನಾಗಮಂಗಲ ಕೃಷ್ಣಮೂರ್ತಿ (10 ಸಾವಿರ) ಪಡೆದಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೂ ಮೊದಲು 10 ಗಂಟೆಗೆ ಶಿವಮೊಗ್ಗ ಯುವರಾಜ್ ಮತ್ತು ತಂಡದವರಿಂದ ಜಾನಪದ ಭಾವ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.