ಬೆಂಗಳೂರು ವಿವಿ ಒಡೆದು ಎರಡು ಪ್ರತ್ಯೇಕ ವಿವಿ
ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಕಾಲದಲ್ಲಿ ಎನ್ ರುದ್ರಯ್ಯ ಸಮಿತಿ ಮಾಡಿದ್ದ ಶಿಫಾರಸ್ಸಿನ ಅನ್ವಯ ಈ ವಿಭಜನೆ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಆಚಾರ್ಯ ಹೇಳಿದರು.
ಸದ್ಯ ವಿ.ವಿ. ವ್ಯಾಪ್ತಿಗೆ ಸುಮಾರು 760ಕ್ಕೂ ಹೆಚ್ಚು ಕಾಲೇಜುಗಳು ಒಳಪಡುತ್ತವೆ. ವಿದ್ಯಾರ್ಥಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರಿಂದ ಶಿಕ್ಷಣ ಗುಣಮಟ್ಟ ಕಾಪಾಡಿಕೊಳ್ಳಲು ಕಷ್ಟವಾಗುತ್ತಿದೆ.
ಹೊಸ ವಿವಿ ಹೆಸರುಗಳು: ಕೋಲಾರ ಮತ್ತು ಚಿಕ್ಕಬಳ್ಳಾಪುರ ವ್ಯಾಪ್ತಿಗೆ ಒಂದು ವಿಶ್ವ ವಿದ್ಯಾಲಯ, ಬಿಬಿಎಂಪಿ ವ್ಯಾಪ್ತಿಗೆ ಮತ್ತೊಂದು ಎಂದು ರೂಪಿಸಲಾಗುವುದು. ಬೆಂಗಳೂರು ಉತ್ತರ ಹಾಗೂ ದಕ್ಷಿಣ ವಿಶ್ವ ವಿದ್ಯಾಲಯ ಎಂದು ಹೆಸರಿಸುವ ಸಾಧ್ಯತೆಯಿದೆ.
250 ಕಾಲೇಜುಗಳಿಗೆ ಒಂದು ವಿ.ವಿಯನ್ನು ತೆರೆಯಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಕುಲಪತಿ ಹಾಗೂ ಸಂಬಂಧಪಟ್ಟವರೊಂದಿಗೆ ಶೀಘ್ರದಲ್ಲಿಯೇ ಸಭೆ ನಡೆಸಲಾಗುವುದು. ನಂತರ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಅಂತಿಮ ಕ್ರಮ ಕೈಗೊಳ್ಳಲಾಗುವುದು ಎಂದು ಆಚಾರ್ಯ ಹೇಳಿದರು.
ಈ ರೀತಿ ಬೆಂ.ವಿ.ವಿಯನ್ನು ಮೂರು ಭಾಗಗಳನ್ನಾಗಿ ಮಾಡುವುದರಿಂದ ಪರೀಕ್ಷಾ ಫಲಿತಾಂಶಗಳು ಶೀಘ್ರವಾಗಿ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತದೆ. ಉಪ ಕುಲಸಚಿವ ಡಾ. ಎನ್ ಪ್ರಭುದೇವ ಅವರ ಮೇಲೆ ಎಬಿವಿಪಿ ಹಲ್ಲೆ ಮಾಡಿದ್ದು ಕೂಡಾ ಪರೀಕ್ಷಾ ಸಂಬಂಧಿಸಿದ ಗೊಂದಲಕ್ಕೆ ಎಂಬುದನ್ನು ಮರೆಯುವಂತಿಲ್ಲ ಎಂದು ಆಚಾರ್ಯ ಹೇಳಿದರು.